ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಹುದೋ ದೇವ ನೀ ದಯಯುತನೆಂಬುದು ಸಹಜವೋ ಎಲೆ ರಂಗ ಪ ಮಹದುಪಕಾರವ ಗೈವೆ ಜಗಕೆಲ್ಲ ಅಹುದೋ ಅಹುದೋ ಸಲೆ ಸಲಹುವ ಪಿತ ನೀ ಅ.ಪ ಅಜಗೆ ನೇತ್ರವನಿತ್ತೆ ಗಜಕೆ ಪ್ರಾಣವನಿತ್ತೆ ಅಜಮಿಳನಿಗೆ ಮೋಕ್ಷಪದವಿಯನಿತ್ತೆ ಭಜನೆಗೈಯುವ ತುಂಬುರು ನಾರದರಿಂಗೆ ನಿಜಸುಖ ಸಾಮ್ರಾಜ್ಯ ಪದವಿಯನಿತ್ತೆ 1 ತರಳನ ನುಡಿಕೇಳಿ ಕಂಬದೊಳುದಯಿಸಿ ದುರುಳರಕ್ಕಸನಶಿಕ್ಷಿಸಿದೆ ತರಳ ಧ್ರುವನು ಗೈದಾ ತಪಸಿಗೆ ನಲಿಯುತೆ ವರಸುಖಪದವಿತ್ತ ಕರುಣಾಕರನೀ 2 ಭೂತಳದೊಳು ಜನ್ಮವಾಂತಿಹ ಸಾಸಿರ ಚೇತನಾಚೇತನ ವಸ್ತುಗಳನು ನೀ ಪ್ರೀತಿಸಿ ಪೊರೆಯುವ ರೀತಿಯದಾಶ್ಚರ್ಯ ಏ ತೆರ ಪೇಳ್ದೊಡನಂತಮಹಿಮ ನೀ 3 ದೇವದೇವನೆ ನಿನ್ನ ಪಾವನಚರಣವು ದೇವಮುನಿಗಳೆಲ್ಲ ಸೇವಿಸಲರಿದೈ ಭಾವಜಪಿತ ರಾಮದಾಸಾಚೇತ ಸಾಕು ಜನ್ಮವಬಿಡಿಸೊ ಮಾವಿನಕೆರೆರಂಗಾ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕರುಣಾಕರನೀತ ಕರಿಭಯ ಹರಿದಾತ ಹರಿಪರಂದೈವೀತ ಗುರುನಾಥ ಧ್ರುವ ಮೂರುಗುಣರಹಿತ ಮೂರುಲೋಕ ವಂದಿತ ಮುರಹರನಹುದೀತ ಗುರುನಾಥ 1 ಸುರಜನ ಪೂಜಿತ ಪರಮಾನಂದಭರಿತ ತಾರಕನಹುದೀತ ಗುರುನಾಥ 2 ಪತಿತಪಾವನೀತ ಪಿತಾಮಹನ ಪಿತ ದಾತನಹುದೀತ ಗುರುನಾಥ 3 ಅನುದಿನ ಸಾಕ್ಷಾತ ದೀನದಯಾಳುನೀತ ಗುರುನಾಥ 4 ಭಕ್ತವತ್ಸಲನೀತ ಶಕ್ತಸದ್ಗುರುನಾಥ ಮುಕ್ತಿದಾಯಕನೀತ ಗುರುನಾಥ 5 ಜನವನದೊಳಗೀತ ಮನೋಭಾವಪೂರಿತ ಆನಂದೋ ಬ್ರಹ್ಮನೀತ ಗುರುನಾಥ6 ಗುಹ್ಯಕೆ ಗುಹ್ಯನೀತ ಬಾಹ್ಯಂತ್ರ ಸದೋದಿತ ಮಹಾಮಹಿಮನೀತ ಗುರುನಾಥ 7 ಇಹಪರ ನಮಗೀತ ಮಹಿಪತಿ ಪ್ರಾಣನಾಥ ಸಹಾಕರನಹುದೀತ ಗುರುನಾಥ 8
--------------
ಕಾಖಂಡಕಿ ಶ್ರೀ ಮಹಿಪತಿರಾಯರು