ಒಟ್ಟು 36191 ಕಡೆಗಳಲ್ಲಿ , 138 ದಾಸರು , 9678 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾಕೆ ಜೀವನವೆ ನೀ ಶ್ರೀಕಾಂತನನು ಮರೆವಿ | ವಿವೇಕವೇ ನಿನಗಿದು ? ಪ ಜೋಕೆಯಿಂದಲಿ ನಿನ್ನ ಸಾಕುವ ಶ್ರೀ ಹರಿಯು | ಬೇಕಾದ ವರವೀವ ಭಕ್ತವತ್ಸಲ ದೊರೆಯಾಅ.ಪ ಲೇಸಾದರು ವಿಷಯದಾಸೆಯ ಬಿಡಲೊಲ್ಲಿ | ಏಸು ಜನ್ಮಂಗಳಾದರು ಈ ಶರೀರವು ನಿನ್ನದೆಂದು ತಿಳಿದು || ಪೋಷಿಸುವಿಯೊ ಬರಿದೆ ದೋಷರಹಿತ ಶ್ರೀನಿ- | ವಾಸನ್ನ ನೆನೆದು ನಿರ್ದೋಷವ ಕಳೆದೆನ್ನ ಪೋಷಿಸು ಎನ್ನದಲೆ 1 ಸತಿ-ಸುತರನು ನೀನು ಸಲಹುವೆನೆನುತಲಿ | ಅತಿ ಚಿಂತೆ ನಿನಗ್ಯಾತಕೊ ಗತಿ ನಿನಗಾಗುವ || ಹಿತಚಂತನೆ ಮಾಡೊ ಸದ್ಗತಿಯಾಗುವ ತನಕ | ರತಿಪತಿ ಪಿತನ ನೆನೆದು ನೀ ಪ್ರತಿಕ್ಷಣ ಹರಿಕಥೆ ಕೇಳದಲೆ2 ಪೊಟ್ಟೆಗೋಸುಗ ಭ್ರಷ್ಟರ ಸ್ತುತಿಸಿ ನೀ | ಕೆಟ್ಟು ಪೋಗುವಿ ಯಾತಕೋ ಜೀವನವೆ || ಪುಟ್ಟಿಸಿದವ ನಿನ್ನ ಪೊಟ್ಟೆಗೆ ಕೊಡನೇನೋ | ಕೆಟ್ಟುಹೋಗದೆ ವಿಜಯವಿಠ್ಠಲನ್ನ ನೆನೆದು ಸುಖಿಯಾಗು3
--------------
ವಿಜಯದಾಸ
ಯಾಕೆ ಜೀವನೆ ಒಣ ಉಸಾಬರಿ ನಿನ ಗ್ಯಾಕೆ ಲೋಕದ ಸುಳ್ಳೆ ಕಿರಿ ಕಿರಿ ಪ ಪಾದ ಬಿದ್ದು ಮೊರಿ ಪರ ಲೋಕ ಪದವಿ ಸಂಪಾದಿಸಿ ಮೆರಿ ಅ.ಪ ಇಷ್ಟಬಂಧು ಸತಿಸುತರೆಲ್ಲ ನೀನು ಬಿಟ್ಟು ಹೋಗ್ವಾಗ್ಯಾರು ದಿಕ್ಕಿಲ್ಲ ಎಷ್ಟು ಸಂಪಾದಿಸಿದ ಗಳಿಕೆಲ್ಲ ನೀನು ಕಟ್ಟಿಕೊಂಡು ಸಂಗಡೊಯ್ಯೋಣಿಲ್ಲ ಕುಟ್ಟಿ ಯಮದೂತರು ಕಟ್ಟಿ ಎಳೆಯುವಾಗ ನೀ ಗಟ್ಟಿ ಮಾಡಿದ್ದು ಎಲ್ಲ ಬಟ್ಟಬೈಲೆ 1 ಯಾರು ಮೆಚ್ಚಿದರು ಫಲವಿಲ್ಲ ನಿನ ಗ್ಯಾರು ಮುನಿದರೇನು ಕೆಡುಕಿಲ್ಲ ನೀರಮೇಲಿನ ಲಿಪಿಯಂತೆಲ್ಲಜಗ ಸಾರ ಸುಳ್ಳು ಖರೆವೊಂದಿಲ್ಲ ತೋರುವ ಬಿಸಿಲಿನ ವಾರಿಯಂತೆ ಮಾಯಾ ಕಾರ ತಿಳಕೋ ತೋರುವುದೆಲ್ಲ 2 ಬಂದಿ ಇಲ್ಲಿಗೆ ಬಹಳ ಲಗುಮಾಡಿ ಮತ್ತೆ ಮುಂದೆ ಹೋಗುವುದೆಲ್ಲಿ ತಿಳಿ ಮಂದನಾಗದೆ ಚಾಚಿ ಜ್ಞಾನಕುಡಿ ಅಲ್ಲಿ ನಿಂದು ನೋಡು ನಿಜ ಹುಡುಕಾಡಿ ಇಂದಿನ ಸಮಯವು ಮುಂದೆ ಸಿಗುವುದೇನೋ ತಂದೆ ಶ್ರೀರಾಮಪಾದಕ್ಹೊಂದಿ ಮುಕ್ತಿಯ ಪಡಿ3
--------------
ರಾಮದಾಸರು
ಯಾಕೆ ದಯ ಬಾರದೋ | ಕೃಷ್ಣಾ | ಯಾಕೆ ದಯಾ ಬಾರದೋ || ಪ ಕಾಕು ಜನರ ಸಂಗ ಕಳೆದು | ವ್ಯಾಕುಲ ನೀಗುವುದಕ್ಕೆ ಅ.ಪ. ಮಾನ ಅಪಮಾನವೆಲ್ಲ | ಮಾನ ನಿಧಿಯಾಧೀನವೆಂದುಸಾನುರಾಗದಿ ಧೇನಿಸುವನ | ಧೀನನ ಪರಿಪಾಲಿಸಲೂ 1 ಭಾರ | ಸತತ ನಿನಗಲ್ಲದಲೇ2 ಪರರಿಗೆ ಶಿರವ ಬಾಗಿ | ಕರವನೊಡ್ದಿಸದಲೇಶರಣರ ಸಲಹೊ ಗುರು | ಗೋವಿಂದ ವಿಠಲನೆ 3
--------------
ಗುರುಗೋವಿಂದವಿಠಲರು
ಯಾಕೆ ದಯಬಾರದೊ ಕಾಂತೇಶ ಪ್ರಾಣೇಶ ಸಾಕಲಾರದೆ ಪೋದೆಯಾ ಎನ್ನನು ಪ. ಏಕಚಿತ್ತದಿ ನಿನ್ನ ಚರಣ ನಂಬಿ ಬರಲು ಭಾರತೀಶ ಅ.ಪ. ತೊಳಲಿ ಬಳಲಿ ಸುಖ ಸುಳಿವೆಂಬೋದರಿಯದೆ ನಳಿನಾಕ್ಷನ ದಾಸ ನಿನ್ನ ಕೀರ್ತಿ ಇಳೆಯೆಲ್ಲ ಪೊಗಳಲು ಸಲಹುವನೆಂತೆಂದು ಬಳಿಗೆ ಬರಲು ಮನಕರಗದೆ ತಂದೆ 1 ಅಂದು ಕನಸಿನಲ್ಲಿ ಶಿರದಲ್ಲಿ ಕರವಿಟ್ಟೆ ಇಂದೆಲ್ಲಿ ಪೋಯಿತೊ ಆ ಕರುಣ ತಂದೆ ಮುದ್ದುಮೋಹನ ಗುರುಗಳ ವಚನವ ಇಂದು ಒಲಿದೆನ್ನ ಕಾಯೊ2 ವಿೂಸಲ ದಾಸ್ಯಕೆ ಆಶೆ ಮಾಡಿದೆನೆಂದು ದೋಷವೆಣಿಸುವರೆ ಎನ್ನಲಿ ನೀ ಶೇಷಶಯನನೆ ಬಲ್ಲೆನೊ ಇದರ ಮರ್ಮ ಘಾಸಿಗೊಳಿಸದೆ ನೀ ಅಭಯವನೀಯೊ 3 ರಾಮದಾಸ್ಯವ ಬಯಸಿ ನೇಮದಿಂದಲಿ ಇದ್ದು ರಾಮನಾಗಮ ಕಂಡು ಎರಗಿ ನಿಂದು ಪತಿ ಪಾದ ದಾಸ ಸಿದ್ಧಿಯ ಪಡೆದು ಭೂಮಿಯೊಳು ಖ್ಯಾತನಾದೆಯೊ ಆಂಜನೇಯ 4 ಚಿತ್ತಿದಿ ಕೃಷ್ಣನ ದಾಸತ್ವ ಸಾಧಿಸಿ ಮತ್ತೆ ಮುನಿಯಾಗಿ ಗ್ರಂಥವ ರಚಿಸಿ ಚಿತ್ತದಿ ಗೋಪಾಲಕೃಷ್ಣವಿಠ್ಠಲನ ಪಾದ ನಿತ್ಯದಿ ಭಜಿಪೆ ನೀ ಮತ್ತೆನ್ನ ಕಾಯೊ 5
--------------
ಅಂಬಾಬಾಯಿ
ಯಾಕೆ ದಯವುಬಾರದು ಗೋಪಾಲಕೃಷ್ಣಾ ಪ ಕರುಣನಾದ ದೇವ ಅ.ಪ ಬಿಡದಾನಂದಾದಿ ಇನ್ನು ಇಂದಿರೆ ರಮಣ 1 ನಿನ್ನ ಧ್ಯಾನಾವೇಗತಿ ಎನ್ನುತ ನೀ ಎಂದೆಂದಿಗಾಪ್ತನು ಛಲದಾನಿ ಇರುವದು ನಿನಗೆ ಎನ್ನ ದಿವ್ಯದಾನಿಗಳರಸ 2 ತ್ರಿಜಗವಂದಿತಧೊರಿಯೆ ಸದ್ಗುಣಶೀಲ ಸುಜನರ ಭಾಗ್ಯನಿಧಿಯೆ ಜಲದೊಳು ಯಿ ----- ಸುರನುತ-----ತ ಪರಾಕ್ರಮ 3
--------------
ಹೆನ್ನೆರಂಗದಾಸರು
ಯಾಕೆ ನಡುಗುವೆ ತಾಯಿ ಭೂಕಾಂತೆಯೆ ಪ ಲೋಕನಾಥನ ರಾಣಿ ಪರಮ ಕಲ್ಯಾಣಿ ಅ.ಪ. ಬುಧರು ಸನ್ಮಾರ್ಗವನು ಒದರಿ ಬಿಟ್ಟರೆ ತಾಯಿ ಅದಟರಾದವರು ಗರ್ವದಿ ಮೆರೆವರೆ ಮದದ ಸಂಪದವು ವೆಗ್ಗಳಿಸಿತೆ ವಣಿಜರಿಗೆ ಕದನಕೆ ಕಾಲ್ಕೆರೆಯುತಿಹರೆ ಮಿಕ್ಕವರೆಲ್ಲ 1 ಕುಲಶೀಲಗಳನೆಲ್ಲ ಕೆಡಿಸಿ ನೆಲಗೆಡಿಸಿದರೆ ಕಳುವು ಹಾದರ ನುಸುಳು ಬಲವಾಯಿತೆ ಲಲನೆÀಯರ ವ್ರತನೇಮಕಳಿವು ಬಂದಿತೆ ತಾಯಿ ಹೊಲಬು ತಪ್ಪಿದೆ ಭಕ್ತಿ ಜಲಜಾಕ್ಷ ಪಥದಿ 2 ಆವ ಕಾರಣದಿಂದುದಯಿಸಿತು ಈ ಚಿಂತೆ ಆವನಿಂದಾಯ್ತಮ್ಮ ಈ ಉಬ್ಬಸ ದೇವಿ ನೀ ದುಃಖಿಸುವ ಬಗೆ ನೋಡಿ ಮನ್ಮನವು ಬೇವುದಿಗೊಳುತಿಹುದು ಶ್ರೀ ಕಾಂತನಾಣೆ 3
--------------
ಲಕ್ಷ್ಮೀನಾರಯಣರಾಯರು
ಯಾಕೆ ನಿನಗೆ ಮನವೆ ವ್ಯಥೆಯು ಎಷ್ಟು ಲೋಕನಾಯಕ ಶ್ರೀಲೋಲ ಲಕ್ಷ್ಮಯ್ಯಾ ರಮಣ ಶ್ರೀಕಪರೇಯಾ ನಿನ್ನನ್ನೇ ಸ್ಮರಿಸುವುದು ಬಿಟ್ಟೂ ಪ ಹಲವು ಹಂಬಲಿಸಿದರೇನು ಫಲಾ ವ್ಯರ್ಥಾ ಬಳಲುವದೊಂದೇ ಅಲ್ಲದೆ ಬಾಧೆಯಿಂದಾ ಅಜ ಬ್ರಹ್ಮಾಂಬರದ ವರ-----ಆರಾರಿಗ್ವಶನಲ್ಲಾ ನಳಿನಾನಾಭನಾ ದಿವ್ಯನಾಮಾ ಭಜನೆಯ ತೊರೆದು 1 ಹರಿಶ್ಚಂದ್ರಾ ನಳರಾಜಾ-------ದಶರಥ ಮೊದಲು ಪುರಾಕೃತ ಕರ್ಮಾದಿ ಭಂಗಾ ಬಡಲಿಲ್ಲೇನೋ ಅರಿತೂನೀ ಹೃದಯಾದಿ ಅನ್ಯಚಿಂತನೆ ಹಿಡಿದು ಪರಮಾತ್ಮ ಪರಬ್ರಹ್ಮನ ಪಾದಧ್ಯಾನವೇ ಬಿಟ್ಟು 2 ಧರೆಯೊಳಾಧಿಕನಾದ ಧೋರಿ 'ಹೊನ್ನವಿಠಲನ’ ಚರಣವೇ ಗತಿಯೆಂದು ಚಿತ್ತಾದಲೆ ಸ್ಥಿರವಾಗಿ ಪೂಜಿಸಿ ಸೇವೆಯನೆ ಮಾಡಿ ಪರಮಹರುಷದಿಂದ ಪಡೆಯಾದೆ ಹರಿಕರುಣಾ 3
--------------
ಹೆನ್ನೆರಂಗದಾಸರು
ಯಾಕೆ ನಿನಗೆ ಲೋಕದುಸಾಬರಿ ಜಗ ದೇಕನಾಥನಿಗೆ ಬೀಳು ಮೊರೆ ಪ ಸಾಕುಯೆಂದು ಲೋಕೈಕನ ಬೇಡಿ ನಡಿ ಏಕಚಿತ್ತದಿ ವೈಕುಂಠದಾರಿ ಅ.ಪ ಸತ್ಯಸಂಗವೆಂಬ ಛತ್ತರ್ಹಿಡಿ ಪಥ ಚಿತ್ತ ಶುದ್ಧಿಯಿಂದ ಗುರ್ತುಮಾಡಿ ಭಕ್ತವತ್ಸಲನ ಸತ್ಯ ಬಿರುದುಗಳ ಭಕ್ತಿಯಿಂ ಕೂಗುತ್ತ ನಿರ್ತ ತುರ್ತುನಡಿ 1 ವನಜನಾಭನ ಕಥೆ ಶ್ರವಣಮಾಡಿ ಬಿಡ ದನುಭವದೊಳು ನಿಜಮರ್ಮ ಹುಡುಕಾಡಿ ಮನಸಿಜ ಜನಕನ ಚರಣದಾಸರ ಕೂಡಿ ಪಡಿ 2 ಮಾನ ಅಭಿಮಾನವೆಲ್ಲ ಸಮ ನೋಡಿ ನಿನ್ನ ನಾನಾ ಕಲ್ಪನೆಗಳ ಕಡೆಮಾಡಿ ಜ್ಞಾನಜ್ಯೋತಿ ಹಚ್ಚಿ ಧ್ಯಾನದೃಷ್ಟಿ ಚಾಚಿ ಜಾಣ ಶ್ರೀರಾಮನ ಖೂನ ಹಿಡಿ 3
--------------
ರಾಮದಾಸರು
ಯಾಕೆ ನಿನ್ನವರೊಳು ದೂರದೃಷ್ಟಿ ಪ್ರಭುವೆ ಲೋಕಬಂಧು ದಯಾಸಿಂಧು ದಾಸಜನರರಸ ಪ ಭ್ರಷ್ಟನಿವ ನಿತ್ಯದಲಿ ಮುಟ್ಟಿ ಸ್ನಾನಗೈಯನೆಂದು ಬಿಟ್ಟಿ ಬೇಸರ ಮಾಡಿ ಸಿಟ್ಟಗೆದ್ದಿರುವ್ಯೋ ಪುಟ್ಟಿ ಜತೆಗೂಡಿಲ್ಲೆ ಬಿಟ್ಟು ಅಗಲುವ ದೇಹ ಎಷ್ಟು ತೊಳೆದರೇನೆಂದು ಗಟ್ಟಿಮಾಡಿಬಿಟ್ಟೆ 1 ಕಡುಹೀನ ಕುಲಯೋಗ್ಯ ಮಡಿ ಅರಿಯ ಇವನೆಂದು ಕಡುಗೋಪದಿಂದೆನ್ನ ನುಡಿಕೇಳದಿರುವ್ಯೋ ಮುಡಿಚೆಟ್ಟಿನಲಿ ಬಂದು ಕಡುಹೊಲಸು ತುಂಬಿರ್ದ ಜಡದೇಹಕ್ಯಾತರ ಮಡಿಯೆಂದು ಬಿಟ್ಟೆ 2 ನಿತ್ಯನೇಮವರಿಯದ ಅತ್ಯನಾಚಾರಿಯೆಂದು ನಿತ್ತರಿಸದೆನ್ನ ಮುಖವೆತ್ತಿ ನೋಡದಿರುವ್ಯೋ ಪಿತ್ತ ರಕ್ತ ಮಜ್ಜ ಮಾಂಸ ಮತ್ತೆ ಮಲ ಮೂತ್ರ ಕ್ರಿಮಿ ಹೊತ್ತ ಭಾಂಡಿದೆಂದರಿತು ನಿತ್ಯನೇಮ ಬಿಟ್ಟೆ 3 ಸತ್ಯಕರ್ಮದ ಮಹಿಮೆ ಗೊತ್ತಿಲ್ಲದಧಮ ಮಹ ಧೂರ್ತ ಪಾತಕಿಯೆಂದು ಮರ್ತೆನ್ನಬಿಟ್ಟ್ಯೋ ಎತ್ತನೋಡಲು ನೀನೆ ಸುತ್ತಿ ವ್ಯಾಪಿಸಿ ಜಗವ ಹೊತ್ತು ಆಳುವುದರಿತು ಸತ್ಕರ್ಮ ಬಿಟ್ಟೆ 4 ನೀನೆ ನಿರ್ಮಿಸಿದಭವ ನಾನಾಲೋಕ ವೇದಶರ್ಮ ನೀನೆ ವಿಶ್ವಾತ್ಮಕನೈ ನೀನೆ ಸೂತ್ರಧಾರಿ ಧ್ಯಾನದಾಯಕ ಮಮಪ್ರಾಣ ಶ್ರೀರಾಮ ನಿನ್ನ ಧ್ಯಾನವೊಂದೆ ಅಧಿಕೆಂದು ನಾನಾಕರ್ಮ ಮರೆದೆ 5
--------------
ರಾಮದಾಸರು
ಯಾಕೆ ನಿರ್ದಯ ಮಾಡಿದೆ ರಂಗಯ್ಯ ನೀನ್ಯಾಕೆ ನಿರ್ದಯ ಮಾಡಿದೆ ಪ ವ್ಯಾಕುಲ ಪಡಲಾರೆ ನಿಮ್ಮ ಲೋಕವ ಸೇರಿಸು ಅ.ಪ ದುಷ್ಟರ ಮಧ್ಯದಲ್ಲಿ ನಾನಿರಲಾರೆ ಸೃಷ್ಟಿಗೀಶ್ವರನೆ ಕೇಳು ಮುಟ್ಟಿ ಭಜಸಿ ನಿಮ್ಮ ಪಾದಪದ್ಮದ ಭಕ್ತಿಯಿಟ್ಟೇನೆಂದರೆ ದುಷ್ಟ ಇಂದ್ರಿಯ ಬಿಡದೆನ್ನ 1 ಪಂಚೇಂದ್ರಿಯಗಳೆನ್ನ ಬಹುಬೇಗ ವಂಚನೆ ಮಾಡುತಿದೆ ಪಂಚಬಾಣನ ಪಿತ ಪರಮಪುರುಷ ರಂಗ ಅ ಕಿಂಚನಾದೆ ನಿನ್ನಂಘ್ರಿಯ ಸೇರಿಸು 2 ಸಂಸಾರವೆಂಬ ಸರ್ಪ ಕಚ್ಚಿ ವಿಷ ಕ್ಷಣದಲ್ಲಿ ತಲೆಗೇರಿತು ಪರಮ ಹಂಸರ ಸಂಗದೊಳಗೆಯಿರಿಸಿ ಎನಗೆ ಭರದಿಂದೇರಿದ ವಿಷ ತಿರುಗೆಸೋ ಶ್ರೀಹರಿ 3 ಸರ್ಪ ತುಂಬಿದ ಕೂಪದಿ ಬಿದ್ದಿಹೆನು ಎನ್ನಪ್ಪ ರಕ್ಷಿಸೊ ಬೇಗದಿ ಸರ್ಪಶಯನ ಶ್ರೀಅಪ್ರಮೇಯ ರಂಗ ಇನ್ನು ಕ್ಷಿಪ್ರದಿಂ ಮುಕ್ತಿಯ ಒಲಿದು ಪಾಲಿಸು ರಂಗ 4 ಅಮ್ಬುಜನಾಭನೆ ನಿಮ್ಮ ಪಾದದಧ್ಯಾನ ಒಂದು ನಿಮಿಷವಾದರು ಮಾಡಲೀಸದು 5 ಹಿಂದಿನ ಕರ್ಮಂಗಳು ಇಂದಿರೇಶ ನಿಂದಕರ ವಶವಾಯಿತು ಇಂದು ಧರ್ಮದಲಿರ್ದೆ ಬಂಧುಗಳ ವಶವಾಯ್ತು ಇನ್ನು ಬಂಧನವೇನಯ್ಯ ಮುಕ್ತ್ಯಾನಂದ ತೋರುವುದಕ್ಕೆ 6 ಎಂದಿಗಾದರೂ ಮುಕ್ತಿಯ ಕೊಡುವೆಯೆಂದಾನಂದ ಇಂದು ಈ ಸಂಸಾರ ಬಂಧನದೊಳಗೆ ನಾ ಒಂದು ನಿಮಿಷ ಜೀವಿಸಲಾರೆನು ರಂಗ 7 ಅಂದು ದ್ರೌಪದಿ ಧ್ರುವÀ ಗಜೇಂದ್ರನ ರಕ್ಷಿಸಲಿಲ್ಲವೆ ಬಂದು ಅಂಬರೀಷ ಅಜಾಮಿಳರ ಪ್ರಹ್ಲಾದನ ಕಂಬದಿಂದಲೆ ಬಂದು ಕಾಯ್ದ ಗೋವಿಂದ 8 ಭಕ್ತವತ್ಸಲನೆಂತೆಂಬೊ ಬಿರುದು ಈಗ ವ್ಯರ್ಥವಾಯಿತೆ ಶ್ರೀರಂಗ ಉತ್ತಮ ಗುರುಗಳು ಶ್ರೇಯೋನಿಧಿಗಳ ವಾಕ್ಯ ಸತ್ಯವ ಮಾಡಿ ಮುಕ್ತ್ಯಾನಂದ ಪಾಲಿಸು 9 ರಂಗನಾಥ ನೀ ಕೈ ಬಿಟ್ಟರೆ ಎನ್ನ ಲೋಕಮಾತೆ ಬಿಡುವಳೆ ಬೇಗ ಮುಕ್ತಿಪಥವ ಪಾಲಿಸುವಳು 10 ಮಾಡಬಾರದ ಮಾಡಿದೆ ಈ ಸಂಸಾರದೆ ನೋಡಬಾರದ ನೋಡಿದೆ ಆಡಬಾರದ ವಾರ್ತೆಗಳನಾಡಿದೆ ಇನ್ನು ಗಾಡನೆ ಮುಕ್ತಿಯ ನೀಡೊ ವೆಂಕಟರಮಣ 11
--------------
ಯದುಗಿರಿಯಮ್ಮ
ಯಾಕೆ ನಿರ್ದಯನಾದೆ ಲೋಕೇಶ ಪ್ರಭುವೆ ಸಾಕಲಾರದೆ ಎನ್ನ ನೂಕಿ ಭವದೊಳಗೆ ಪ ನಿನ್ನ ನಾಮಸ್ಮರಣೆ ಮಾಡದಲೆ ಹಗಲಿರುಳು ಅನ್ಯ ವಿಷಯಗಳಿಂದ ನೊಂದು ಬಳಲಿದೆನೊ ನಿನ್ನ ಧ್ಯಾನವ ಮಾಳ್ಪಚ್ಛಿನ್ನ ಭಕ್ತರೊಳಿರಿಸಿ ಚನ್ನಾಗಿ ಸಲಹೊ ಪ್ರಸನ್ನ ಮಾಧವನೆ 1 ಆಪನ್ನ ಜನರನು ಪೊರೆದೆ ಸನ್ನುತಾಂಗನೆ ದೇವ ಸರ್ವವ್ಯಾಪಕನೆ ಪನ್ನ ಗಾರಿವಾಹನ ಪ್ರಸನ್ನ ಶ್ರೀಹರಿ ಶೌರಿ ಎನ್ನ ಕಡೆಹಾಯಿಸಯ್ಯ ಜೀಯ 2 ಅಕ್ಷಯ ಫಲಪ್ರದ ಪಕ್ಷಿವಾಹನ ಕೃಷ್ಣ ಕುಕ್ಷಿಯೊಳು ಜಗವನಿಂಬಿಟ್ಟ ಶ್ರೀ ಹರಿಯೆ ರಕ್ಷ ಶಿಕ್ಷಕ ಜಗದ್ರಕ್ಷ ಪಾಂಡವ ಪಕ್ಷ ಈಕ್ಷಿಸಿ ಎನ್ನನುದ್ಧರಿಸಿ ಸಲಹದಲೆ3 ಪರಿಪರಿಯ ಕಷ್ಟಗಳ ಪರಿಹರಿಸಿ ಭವದೊಳಗೆ ದುರಿತದೂರನೆ ಕಾಯೊ ಶರಣ ಜನರ ಪರಿಸರನೊಡೆಯ ನಳನಾಮ ಸಂವತ್ಸರದಿ ಕರೆಕರೆಯ ಕಷ್ಟಗಳ ಬಿಡಿಸಿ ಸಲಹದಲೆ4 ಕನಕಗರ್ಭನ ಪಿತನೆ ಕಮಲನಾಭ ವಿಠ್ಠಲ ಮಿನಗುತಿಹ ದಿವ್ಯ ಸೌಂದರ್ಯ ಮೂರುತಿಯೆ ಸನಕಾದಿ ಮುನಿವಂದ್ಯ ಕ್ಷಣ ಬಿಡದೆ ಸ್ಮರಿಸುವರ ಇನಕುಲೇಂದ್ರನೆ ದೇವ ಬಿಡದೆ ಸಲಹದಲೆ5
--------------
ನಿಡಗುರುಕಿ ಜೀವೂಬಾಯಿ
ಯಾಕೆ ನೀನಿಲ್ಲಿ ಪವಡಿಸಿದೆ ಹರಿಯೆ - ಜಗ ಪ ದೇಕ ವಿಖ್ಯಾತ ಪಶ್ಚಿಮ ರಂಗಧಾಮ ಅ ತಮನೊಡನೆ ಹೋರಿ ಬೆಟ್ಟವನು ಬೆನ್ನಲಿ ಪೊತ್ತುರಮಣಿ ಭೂಮಿಯನು ತಂದಾಯಾಸವೂಅಮರವೈರಿಯ ಕರುಳ ಕಿತ್ತ ಕಡು ಧಾವತಿಯೊಕ್ಷಮೆಯನಳೆದೀ ಪಾದಕಮಲ ನೊಂದವೊ 1 ಪೊಡವಿಪಾಲಕರ ವಂಶವನು ವಪನ ಮಾಡಿಕೊಡಲಿಯನು ಬಿಸುಟು ಮಲಗಿದ ಭಾವವೊಮಡದಿಯನು ಕದ್ದೊಯ್ದವನ ಶಿರವನೆ ತರಿದುಒಡಲಿನಾಯಾಸದಲಿ ಪವಡಿಸಿದ ಪರಿಯೋ 2 ವಾಲಿ ಮೊದಲಾದ ಎದುರಾಂತ ವೀರರ ಕೊಂದುಕಾಳಿಯ ಹೆಡೆಯ ತುಳಿತುಳಿದು ಮೈಯಲಸಿತೊಲೀಲೆಗೋಸುಗ ಬಂದು ನಿರ್ವಾಣದಲಿ ನಿಂದುಆ ಲಜ್ಜೆಗಾಗಿ ತಲೆ ಬಾಗಿ ಮಲಗಿದೆಯೊ 3 ನಾಲ್ಕು ಯುಗದಾಧಾರಿ ಕಡೆಗೆ ತುರಗವನೇರಿಸಾಕಾಗಿ ದಣಿದು ನೀನಿಲ್ಲಿ ಮಲಗಿದೆಯೊಸಾಕಾರಿಯಾಗಿ ಗೌತಮ ಮುನೀಶ್ವರನಿಗೆಬೇಕೆಂದು ನೀ ಕೊಟ್ಟ ವರಕೆ ಮಲಗಿದೆಯೊ 4 ಕಾಲ ನೀನಿಲ್ಲಿ ಮಲಗಿದ್ದರೂನಿನ್ನನೆಬ್ಬಿಸುವವರನೊಬ್ಬರನು ಕಾಣೆಉನ್ನಂತ ಕಾಗಿನೆಲೆಯಾದಿಕೇಶವರಾಯಚೆನ್ನ ಶ್ರೀರಂಗಪಟ್ಟಣದ ರಂಗಧಾಮ 5
--------------
ಕನಕದಾಸ
ಯಾಕೆ ನೀನು ಹೀಗೆ ಮಾಡುವಿ ವೀರ ಹನುಮ ಯಾಕೆ ನೀನು ಹೀಗೆ ಮಾಡುವಿ ಪ. ಯಾಕೆ ನೀನು ಹೀಗೆ ಮಾಡುವಿ ಜೋಕೆಯಿಂದ ಸಲಹೊ ಎಂಬ ವಾಕು ಕೇಳದೇನೋ ನಿನಗೆ ಬಿಂಕ ಅ.ಪ. ಸತ್ಯವಂತನೆಂಬ ವಾಕು ಎತ್ತ ಪೋಯಿತೀಗ ಬಿರುದು ಒತ್ತಿ ಒತ್ತಿ ಕೇಳಿದರೂ ಉತ್ತರವÀ ಕಾಣೆನಲ್ಲೊ 1 ಒಡೆಯ ರಾಮಭಂಟನೆನಿಸಿ ಒಡವೆ ವಸ್ತು ಇಟ್ಟುಕೊಂಡು ಬಡಿವಾರದಲಿ ನಿಂತರೀಗ ಬಡವರೆಮ್ಮ ಗತಿಯದೇನೊ 2 ವೀರ ಉಡುಪು ಧರಿಸಿಕೊಂಡು ವೀರ ಭೀಮನೆನಿಸಿಕೊಂಡು ಮೋರೆ ಎತ್ತಿ ನೋಡದಿರಲು ದಾರಿಯಾವುದೆಮಗೆ ಪೇಳು 3 ಮುನಿಯ ರೂಪ ತಾಳಿ ಮತ್ತೆ ಮೌನಧರಿಸಿ ನಿಂತರೀಗ ಮಾನತನದಿ ತುತಿಸುವೆಮಗೆ ಏನು ಮುಂದೆ ಗತಿಯು ಇನ್ನು 4 ಬೇಡಲಿಲ್ಲೊ ನಿನ್ನ ಒಡವೆ ಬೇಡಲಿಲ್ಲೊ ನಿನ್ನ ಭಾಗ್ಯ ಆಡೊ ಒಂದು ಮಾತು ಎನಲು ಮಾಡಿರುವೆ ಮನವ ಕಲ್ಲು 5 ಏನು ಸೇವೆ ಮಾಡಲೀಗ ಏನು ನಿನ್ನ ಸ್ತುತಿಸಲೀಗ ಏನು ಧ್ಯಾನ ಮಾಡಲೀಗ ಏನು ತಿಳಿಯದಲ್ಲೊ ಎನಗೆ 6 ಶುದ್ಧವಾದ ನಿನ್ನ ಒಂದು ಮುದ್ದು ಮಾತು ಕೇಳೆನೆಂದು ಒದ್ದಾಡುವೆನೊ ಮನದಿ ಬಹಳ ಇದ್ದಿಯಾಕೊ ಸುಮ್ಮನಿನ್ನು 7 ಮನದಿ ಎನಗೆ ದೃಢವು ಇಲ್ಲ ಹನುಮ ನಿನಗೆ ದಯವು ಇಲ್ಲ ಮುನಿಸು ಮಾಡೆ ನೀನು ಸಲ್ಲ ಘನವೆ ನಿನಗೆ ಪೇಳೊ ಸೊಲ್ಲ 8 ನಿನ್ನ ಹೊರತು ಪೊರೆವರಿಲ್ಲ ಮನ್ನಿಸಿನ್ನು ಕಾಳಿನಲ್ಲ ನಿನ್ನ ಕೀರ್ತಿ ಜಗದಿ ಬಹಳ ಉನ್ನತದಲಿ ಮೆರೆಸೊ ಮಲ್ಲ 9 ಅನ್ನಕೊಡಿಸಿ ಇಟ್ಟುಕೊಂಡು ಮನ್ನಿಸುವೆನೆಂಬೋ ಇಂಥ ಭಿನ್ನನಾದ ನುಡಿಗೆ ನಾನು ಇನ್ನು ಒಪ್ಪಲಾರೆ ಕಂಡ್ಯ 10 ಕದರುಮಂಡಲಿಗಿ ಹನುಮ ಹೆದರಲಾರೆ ನಿನಗೆ ಇನ್ನು ಒದಗಿ ಪಾಲಿಸೆಂದು ಬೇಡೆ ಹೃದಯ ಕರಗದಲ್ಲೊ ನಿನಗೆ 11 ನಿರುತ ನಿನ್ನ ದಾಸಳೆನಿಸಿ ಚರಿಸುವಂಥ ಎನಗೆ ಒಲಿದು ಅರುಹದಿರಲು ಒಂದು ವಾಕು ಬಿರುದು ಉಳಿವುದೇನೊ ಇನ್ನು 12 ಇಷ್ಟ ಸಲಿಸದಿರೆ ಗೋಪಾಲ ಕೃಷ್ಣವಿಠ್ಠಲಗ್ಹೇಳಿ ನಾನು ಕಟ್ಟಿ ಹಾಕಿಸುವೆನೊ ಎನ್ನ ಮೂರ್ತಿ 13 ಗುರುಗಳಾಜ್ಞೆಯಿಂದ ನಾನು ಹರುಷದಿಂದ ಬಳಿಗೆ ಬರಲು ಗರುವದಿಂದ ನಿನ್ನ ನೇತ್ರ ತೆರದು ನೋಡದಿರುವರೇನೊ 14 ತಂದೆ ನೀನೆ ಸಲಹೊ ಎಂದು ಬಂದು ನಿನ್ನ ಅಡಿಗೆ ಎರಗೆ ಒಂದು ಮಾತನಾಡದಂಥ ಕುಂದು ಏನು ಪೇಳೊ ಇನ್ನು15 ಬೇಡ ಬೇಡ ಛಲವು ಇನ್ನು ಪಾಡಿಪೊಗಳುವಂತೆ ದಯವ ಮಾಡು ಎನ್ನ ಮೊರೆಯ ಕೇಳಿ 16
--------------
ಅಂಬಾಬಾಯಿ
ಯಾಕೆ ಪುಟ್ಟಿಸಿದಿ ಇನ್ನು ಎಲೊ ಹರಿಯೆ | ಲೋಕ ದೊಳಗನುಗಾಲ ತಿರಿದು ತಿಂಬುವಂತೆ ಮಾಡಿ ಪ ಒಡಲಿಗಾಗಿ ಒಬ್ಬನ ಸಂಗಡ ಹೋಗಲು | ಕೊಡುವವನು ಇಲ್ಲೆಂದು ಪರಿಹರಿಸುವ || ಸುಡು ಈ ಶರೀರವ ಬಳಲಲಾರೆನೊ ವಿಷದ, ಮಡುವನಾದರು ಧುಮುಕಿ ಮರಣವಾಗುವೆ ರಂಗಾ 1 ಪ್ರತಿದಿನವೂ ಅನ್ನ ಕೊಡುವವನ ಬಾಗಿಲಿಗ್ಹೋಗೆ | ಹುತವಾಗುವನು ಎನ್ನ ನೋಡುತಲಿ || ಪರಿ ಬದುಕಿ ಇಹೋದಕಿಂತ | ಹತವಾಗಬಹುದಂಬಿನ ಮೊನೆಗೆ ಬಿದ್ದು ರಂಗಾ 2 ಎಲ್ಲಿ ಬೇಡಿದಲ್ಲವೆಂಬೋ ಸೊಲ್ಲಿಲ್ಲಿದೇ | ಒಲ್ಲೆನೋ ಸಾಕು ಈ ನರ ಜನ್ಮವು ಸಿರಿ ವಿಜಯವಿಠ್ಠಲ ನಿ- | ನ್ನಲ್ಲಿ ದೂತರ ಸಂಗದಲ್ಲಿ ಸುಖಬಡಿಸೊ 3
--------------
ವಿಜಯದಾಸ
ಯಾಕೆ ಪುಟ್ಟಿಸಿದಿ ನೀ ಸಾಕಲಾರದೆ ಜಗ-ದೇಕ ಕಾರಣಪುರುಷನೆ ಕೃಷ್ಣ ಪ ವಾಕು ಚಿಂತಿಸೆ ಇಂಥಕಾಕು ಮಾಡುವುದುಚಿತವೆ ಕೃಷ್ಣ ಅ.ಪ. ಒಡಲಿಗನ್ನವ ಕಾಣೆ ಉಡಲು ಅರಿವೆಯ ಕಾಣೆಗಡಗಡನೆ ನಡುಗುತಿಹೆನೋ ಕೃಷ್ಣಮಡದಿ ಮಾತೆಯರ ಬಿಟ್ಟು ಒಡಹುಟ್ಟಿದವರ ಬಿ -ಟ್ಟಡವಿ ಪಾಲಾದೆನಲ್ಲೋ ಕೃಷ್ಣಕುಡುತೆ ಕೊಡುವವರಿಲ್ಲ ನುಡಿಯ ಕೇಳುವರಿಲ್ಲಬಡತನವು ಕಂಗೆಡಿಸಿತೋ ಕೃಷ್ಣಕಡೆ ಹಾಯಿಸುವರ ಕಾಣೆ ನಡುಮಡುವಿನೊಳು ಕೈ ಬಿಡದೆ ದಡವನು ಸೇರಿಸೋ ಕೃಷ್ಣ 1 ಕೊಟ್ಟವರ ಸಾಲವನು ಕೊಟ್ಟು ತೀರಿಸದವರಪೊಟ್ಟೆಯೊಳು ಪುಟ್ಟಲಾಯ್ತೋ ಕೃಷ್ಣಎಷ್ಟು ಜನುಮದಿ ಮನಮುಟ್ಟಿ ಮಾಡಿದ ಕರ್ಮಕಟ್ಟೀಗ ಉಣಿಸುತಿಹುದೋ ಕೃಷ್ಣಸೃಷ್ಟಿಯೊಳಗೆನ್ನಂಥ ಕೆಟ್ಟ ಪಾಪಿಷ್ಠ ಜನಘಟ್ಟಿಸಲಿಲ್ಲವೇನೋ ಕೃಷ್ಣವಿಠ್ಠಲನೆ ನಿನ್ನ ಮನಮುಟ್ಟಿ ಭಜಿಸಿ ಹಿಂದೆಎಷ್ಟು ಜನ ಬದುಕಲಿಲ್ಲೋ ಕೃಷ್ಣ 2 ಆಳು ದೇಹವು ಗೇಣು ಕೀಳಾಗಿ ಪಲ್ಕಿರಿದುಖೂಳ ಜನರ ಮನೆಗೆ ಕೃಷ್ಣಹಾಳು ಒಡಲಿಗೆ ತುತ್ತು ಕೂಳಿಗೆ ಹೋಗಿ ಅವರವಾಲೈಸಲಾರೆನಲ್ಲೋ ಕೃಷ್ಣಬಾಳು ಈ ಪರಿಯಾದ ಮ್ಯಾಲೆ ಭೂಮಿಯಲಿ ಬಹುಕಾಲ ಕಳೆಯುವುದುಚಿತವೆ ಕೃಷ್ಣಆಲಸ್ಯ ಮಾಡದಲೆ ಈ ವ್ಯಾಳ್ಯದಲಿ ಅರಿತುಪಾಲಿಸಲು ಬಹು ಕೀರ್ತಿಯೋ ಕೃಷ್ಣ 3 ಸಿರಿ ಅರಸನೆಂದು ಶ್ರುತಿ ಸಾರುತಿದೆಬಂದುದೀಗೇನು ಸಿರಿಯೋ ಕೃಷ್ಣಒಂದೊಂದು ನಿಮಿಷ ಯುಗಕಿಂತಧಿಕವಾಗುತಿದೆಮುಂದೋರದ್ಹಾಂಗಾಯಿತೋ ಕೃಷ್ಣಸಂದೇಹವಿಲ್ಲ ಗೋವಿಂದ ಶ್ರೀಪದದಾಣೆತಂದೆ ನೀ ರಕ್ಷಿಸದಿರೆ ಕೃಷ್ಣಮುಂದೆ ಭಜಿಸುವರು ಹೀಗೆಂದು ವಾರುತೆ ಕೇಳಿಬಂದುದಪಕೀರ್ತಿ ಮಾತು ಕೃಷ್ಣ 4 ವತ್ಸರ ಈರೀತಿ ಕಾಲಕಳೆದೆನೋ ಕೃಷ್ಣವ್ಯರ್ಥವಾಯಿತು ಜನುಮ ಸಾರ್ಥಕಾಗದು ಕಣ್ಣುಕತ್ತಲೆಗವಿಸಿತಲ್ಲೋ ಕೃಷ್ಣಇತ್ತ ಬಾರೆಂತೆಂದು ಹತ್ತಿಲಿಗೆ ಕರೆದೊಂದುತುತ್ತು ಕೊಡುವರ ಕಾಣೆನೋ ಕೃಷ್ಣವಿಸ್ತರಿಸಲಾರೆ ಇನ್ನೆತ್ತ ಪೋಗಲೊ ನಿನ್ನಚಿತ್ತವ್ಯಾತಕೆ ಕರಗದೋ ಕೃಷ್ಣ 5 ಆರು ಗತಿ ನಿನಗಧಿಕರಾರು ಧಾರುಣಿಯೊಳಗೆತೋರಿಸೈ ಕರುಣನಿಧಿಯೆ ಕೃಷ್ಣಈರೇಳು ಲೋಕಕಾಧಾರವಾದವಗೆ ಬಲುಭಾರವಾದವನೆ ನಾನು ಕೃಷ್ಣಮೀರಿ ನುಡಿಯಲು ಹದಿನಾರೆರಡು ಪಲ್ಗಳುಬೇರು ಕಳಕಳಯಿತೋ ಕೃಷ್ಣತೋರು ಬಂಕಾಪುರದ ಧಾರುಣಿಪುರವಾಸವೀರ ನರಸಿಂಹದೇವ ಕೃಷ್ಣ 6 ಹರಿಯಾತ್ರೆ ಮಾಡಲಿಲ್ಲ ಹರಿಮೂರ್ತಿ ನೋಡಲಿಲ್ಲಹರಿದಾಸ ಸÀಂಗವಿಲ್ಲ ಕೃಷ್ಣಹರಿಸ್ಮರಣೆ ಮಾಡಲಿಲ್ಲ ಸುರನದಿಯ ಮೀಯಲಿಲ್ಲಧರಣಿ ಸಂಚರಿಸಲಿಲ್ಲ ಕೃಷ್ಣಅರಿತರಿತು ಮನ ವಿಷಯಕೆರಗಿ ಹರುಷವ ತಾಳಿಬರಿದಾಯಿತಾಯುವೆಲ್ಲ ಕೃಷ್ಣಮರುತಾಂತರ್ಗತ ಸಿರಿಯರಸ ಹರಿಯೆಂದುಹರುಷಾಬ್ದಿ ಮಗ್ನನಲ್ಲ ಕೃಷ್ಣ7 ಹರಿನಾರಾಯಣನೆಂದು ಕರವೆತ್ತಿ ಮುಗಿದೊಮ್ಮೆ ಮೈ ಮರೆದು ನಟಿಸಲಿಲ್ಲ ಕೃಷ್ಣಹರಿಸ್ಮರಣೆ ಸ್ಮರಿಸಿ ಸಿರಿತುಳಸಿ ಪುಷ್ಪವನುಕರವೆತ್ತಿ ನೀಡಲಿಲ್ಲ ಕೃಷ್ಣಸರ್ವಜ್ಞರಾಯರು ವಿರಚಿಸಿದ ಗ್ರಂಥವನುದರುಶನವೆ ಮಾಡಲಿಲ್ಲ ಕೃಷ್ಣಸ್ಮರಿಸಲಾರದ ಪಾಪ ಸ್ಮರಣೆಪೂರ್ವಕ ಮಾಡಿಸ್ಥಿರಭಾರನಾದೆನಲ್ಲೋ ಕೃಷ್ಣ 8 ದುರುಳಜನರೊಡನಾಡಿ ಹರಿಣಾಕ್ಷಿಯರ ಕೂಡಿಸರಿ ಯಾರು ಎಂದು ತಿರುಗಿ ಕೃಷ್ಣನಿರುತ ಕ್ಷುದ್ರವ ನೆನೆಸಿ ನೆರೆದೂರ ಮಾರಿ ಹೆಗ್ಗೆರೆಗೋಣನಂತೆ ತಿರುಗಿ ಕೃಷ್ಣಪರರ ಅನ್ನವ ಬಯಸಿ ಶರೀರವನೆ ಪೋಷಿಸಿಶಿರ ಒಲಿದು ಶಿಲೆಗೆ ಹಾಯಿದು ಕೃಷ್ಣಶರಣವತ್ಸಲನೆಂಬೊ ಬಿರುದು ಪಸರಿಸುವಂಥಕರುಣ ಇನ್ನೆಂದಿಗಾಹುದೊ ಕೃಷ್ಣ 9 ಉರಗ ಫಣಿ ತುಳಿಯಲೊಎರಡೊಂದು ಶೂಲಕ್ಹಾಯಲೊ ಕೃಷ್ಣಕೊರಳಿಗ್ಹಗ್ಗವ ಹಾಕಿ ಮರವೇರಿ ಕರಬಿಡಲೋಗರಗಸದಿ ಶಿರಗೊಯ್ಯಲೋ ಕೃಷ್ಣಕರುಣವಾರಿಧಿ ಎನ್ನ ಕರಪಿಡಿದು ಸಲಹದಿರೆಧರೆಯೊಳುದ್ಧರಿಪರ್ಯಾರೋ ಕೃಷ್ಣ 10 ಎಷ್ಟು ಹೇಳಲಿ ಎನ್ನ ಕಷ್ಟ ಕೋಟಿಗಳನ್ನುಸುಟ್ಟೀಗ ಬೇಯ್ಯುತಿಹವೋ ಕೃಷ್ಣಕಷ್ಟಬಟ್ಟ ಮಗನೆಂದು ದೃಷ್ಟಿ ನೀರೊರೆಸೆನ್ನಪೊಟ್ಟೆಯೊಳ್ಪಿಡಿವರ್ಯಾರೊ ಕೃಷ್ಣಕೃಷ್ಣನಾಮ ವಜ್ರಕ್ಕೆ ಬೆಟ್ಟ ದುರಿತವು ನೀಗಿಥಟ್ಟನೆ ಬಂದು ನೀನು ಕೃಷ್ಣಇಷ್ಟವನು ಸಲಿಸಿ ಗುಟ್ಟ್ಟಲಿ ಶ್ರೀರಂಗವಿಠಲ ಎನ್ನ ಕಾಯೋ ಕೃಷ್ಣ 11
--------------
ಶ್ರೀಪಾದರಾಜರು