ಒಟ್ಟು 1459 ಕಡೆಗಳಲ್ಲಿ , 109 ದಾಸರು , 1073 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೆಳೆಬೆಳೆದು ಮನದಾಸೆಗಳ ಕಳೆದೆನಯ್ಯ ಸುಳಿದಿರ್ಪುದೊಂದಾಸೆ ಅದ ಪೇಳ್ವೆನಯ್ಯ ಪ ತೊಳತೊಳಲಿ ಬಳಬಳಲಿ ಬೆಂಡಾದೆನಯ್ಯ ಕೊಳಕೊಳದಿ ಮುಳುಮುಳುಗಿ ತಳಮಳಿಪೆನು ಅ.ಪ ಅದು ನಿನ್ನ ಬಳಿಸಾರ್ದು ನಿಲ್ವಪರಿಯಾಸೆ ಅದು ನಿನ್ನ ಪಾದಗಳ ನೋಡಿ ನಲಿವಾಸೆ ಅದು ನಿನ್ನ ನಾಮಗಳ ಪಾಡಿನುಡಿವಾಸೆ ಅದು ನಿನ್ನ ನಸುನಗೆಯ ಬೇಡಿಕೊಂಬಾಸೆ 1 ಅದು ನಿನ್ನ ಅಡಿಗಳಿಗೆ ಮುಡಿಯಿಡು[ವಾಸೆ] ಅದು ನಿನ್ನ ಕೊರಳಿಗೆ ಮಾಲೆಯಿಡು[ವಾಸೆ] ಅದು ನಿನ್ನ ಬೆಡಗುಗಳ ನುಡಿನುಡಿಯೊಳೆಸೆವಾಸೆ ಅದು ಮಾಂಗಿರಿಯ ರಂಗ ನಿನ್ನ ಕೃಪೆಯಾಸೆ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬೇಗ ಪಾಲಿಸೊ ಬ್ರಹ್ಮಣ್ಯತೀರ್ಥ | ಕರುಣಿಸು ಇಷ್ಟಾರ್ಥ ಪ. ಯೋಗಿವರ ಶ್ರೀ ಅಬ್ಬೂರು ನಿಲಯ | ಸದ್ಭಕ್ತರಿಗತಿ ಪ್ರಿಯ ಅ.ಪ. ಸತ್ವಗುಣನೆ ಸರ್ವೋತ್ತಮ ಹರಿ ಪ್ರಿಯ | ಪಾವನ ಶುಭಕಾಯ ಚಿತ್ತದಲಿ ಹರಿ ಚಿಂತನೆ ಮಾಡುತಲಿ | ವರಗಳ ನೀಡುತಲಿ ಆತ್ಯಧಿಕದ ಕಣ್ವ ನದಿಯ ತೀರ ವಾಸ | ನಿನ್ನಲಿ ಹರಿ ವಾಸ ಸುಜನರುಗಳ ಪೊರೆವೆ 1 ಪ್ರೇಮದಿ ನೀ ಕೊಳಲು ಗೋಕ್ಷೀರವನೆರೆದೆ ಆಗಮಗಳ ಕಲಿಸಲು ಮೌಂಜಿಯ ಕಟ್ಟಿ | ಶ್ರೀಪಾದರಲಿ ಬಿಟ್ಟೆ ಯೋಗಿ ವ್ಯಾಸರಾಯರು ಎಂದ್ಹೆಸರಿಟ್ಟು | ಸನ್ಯಾಸವನೆ ಕೊಟ್ಟು 2 ಪಾಪಿ ಜನರ ಪಾವನಗೈಯುತಲಿ | ಶ್ರೀನಿಧಿ ಧ್ಯಾನದಲಿ ಕಾಪಾಡು ಸಧ್ಭøತ್ಯರ ದಯದಿಂದ | ತಪಸಿನ ಶಕ್ತಿಂದ ಶಿಷ್ಟರ ಪೊರೆಯುತಲಿ ಗೋಪಾಲಕೃಷ್ಣವಿಠ್ಠಲನನು ಹೃದಯದಲಿ | ನಿತ್ಯದಿ ಕಾಣುತಲಿ 3
--------------
ಅಂಬಾಬಾಯಿ
ಬೇಡಲೇತಕೆ ಪರರ ದೇಹಿಯೆಂದು ಪ ನೀಡುವಾ ಧೊರೆ ಎನಗೆ ನೀನಿರಲು ಸರ್ವದಾ ಅ.ಪ. ಗ್ರಾಸವನು ಬೇಡೆ ದೂರ್ವಾಸ ಮುನಿಗಂದನ್ನ ಅನಾ ಯಾಸದಿಂ ತತ್ಕಾಲದಲಿ ಕಲ್ಪಿಸಿ ಆ ಸಂಯಮಿಗೆ ಉಣಿಸಿ ದಣಿಸಿದ ಮಹಾ ದಾತಾ ದಾಶರಥೆ ನಿನ್ನ ಬಿಟ್ಟನ್ಯ ದೇವತೆಗಳನು 1 ಖಳ ದುಶ್ಯಾಸನನು ದ್ರೌಪದಿಯ ಸಭೆಯೊಳು ದು ಕೂಲವನು ಸೆಳೆಯೆ ದ್ವಾರಕ ಮಂದಿರಾ ಶ್ರೀ ಲೋಲ ಶ್ರೀ ಕೃಷ್ಣ ಕರುಣಿಸು ಕರುಣಿಸೆನೆ ಪಾಂ ಚಾಲಿ ಮೊರೆ ಕೇಳಿ ದಿವ್ಯಾಂಬರ ನಿಚಯವಿತ್ತೆ 2 ಮಡದಿ ಕಳುಹಲು ಬಂದ ಬ್ರಾಹ್ಮಣನ ಪೀಡಿಸುವ ಬಡತನವ ಕಳೆದೆ ಒಪ್ಪಿಡಿಯವಲಿಗೆ ಪೊಡವಿಯನ್ನಾಳಿಸಿದೆ ಕ್ರಿಮಿಗೊಲಿದು ಕಾರುಣ್ಯದಲ್ಲಿ ಮೃಡ ಬಿಡೌಜರೀಪ್ಸಿತ ಕೊಡುವೆ 3 ತಾಪಸೋತ್ತಮ ಮೃಕಂಡಾತೃಜಗೆ ಕಲ್ಪಾಯು ನೀ ಪೂರ್ತಿ ಮಾಡಿ ಅಲ್ಪಾಯು ಕಳೆದು ಆ ಪರ್ವತೇಶ್ವರನ ಪಟ್ಟಣವ ಸಾರ್ದು ಸಾಂ ದೀಪ ತನಯನ ತಂದ ಸರ್ವಾಂತರ್ಯಾಮಿ 4 ವಿಶ್ವ ಜೀವರಿಗನ್ನ ಕಲ್ಪಕನೆ ನೀನಿರಲು ಜ್ಞಾನ ದ್ರವ್ಯ ಅಲ್ಪ ಮಾನವರಿಗಾಲ್ಪರಿರೇನಹುದು ಅಹಿ ತಲ್ಪ ಜಗನ್ನಾಥ ವಿಠ್ಠಲ ಕಲ್ಪತರುವಿರಲು 5
--------------
ಜಗನ್ನಾಥದಾಸರು
ಬೇಡಿಕೊಂಬೆನು ನಿನ್ನ ಮನಬಿಚ್ಚಿ ತೋರಿಸುವೆ ಪ ಪಶುವಾದ ಎನ್ನ ಮನಸು ಪಿಸುಮಾತು ಹೇಳುತಿಹುದು ತುಸುಗುಣವಿಲ್ಲ ನಿನಗಂತೆ ಬಕುತಿಯೇಕಯ್ಯ ನಿನಗೆ ಅ.ಪ ಬದುಕು ತಪ್ಪಿಸಿ ನಿಲ್ಲು ನೀನಾಗಿ ಎನ್ನುತಿದೆ ಕದಿಮೋಸ ಮನವನು ನಂಬಿ ಬಾಳುವೆನೆಂತು ಬುದ್ಧಿ ಕಲಿಸಯ್ಯ ಮನಕೆ ಬೆಳಕು ತೋರಿಸು ನಿನ್ನ ಬದ್ಧಗೆಳೆಯನಾಗಿಸು ಅದನು ಬದುಕಿ ಬಾಳುವೆನಯ್ಯ 1 ಹಿಡಿಯಾಸೆ ಎನಗುಂಟು ಗಂಟುಕಟ್ಟಿ ನಿನ್ನೊಡನೆ ನಡೆವೆ ದಿಟ್ಟತನದಲಿ ಕಮಲಾಕ್ಷ ಲಾಲಿಸಯ್ಯ ಬಿಡಲಾರೆ ನಿನ್ನನೀಗ ಬೆಳಕು ಕಂಡಿತು ಎನಗೆ ಒಡೆಯ ಶೆಲ್ವರಾಯ ನನಸು ಕನಸಾಗಿ ಮಾಡದಿರು 2
--------------
ಸಂಪತ್ತಯ್ಯಂಗಾರ್
ಬ್ರಹ್ಮ ತಾವೆಂದು ಭಾವಿಸಿರೋ ಭಾಗ್ಯರಿರಾಬ್ರಹ್ಮತಾವೆಂದು ಭಾವಿಸಿದವರುಂಟು ಪ ಕಪಿಲ ನಾರದನು ಗೌತಮನು ಕಣ್ವನುನಿಪುಣ ಕೌಶಿಕನು ನಿರ್ಮಲನು ಅಗಸ್ತ್ಯಾಉಪಮಾನ್ಯ ಶಿಖಿ ಪಂಚ ದೂರ್ವಾಸರಂತಿವರು ಬ್ರಹ್ಮ ತಾವೆಂದು ಭಾವಿಸುವರು 1 ವ್ಯಾಸ ಶ್ರೀವತ್ಸ ಶುಕನು ಶೌನಕನುವಾಶಿಷ್ಟ ಅತ್ರಿ ಗಾರ್ಗೇಯನು ಕಶ್ಯಪನುದಾಸ ಪ್ರಹ್ಲಾದ ಬಕದಾಲ್ಬ್ಯ ಜಮದಗ್ನಿಭಾಸುರರಿಂತಿವರು ಬ್ರಹ್ಮತಾವೆಂದು ಭಾವಿಸುವರು 2 ಸನಕ ಸನಂದನ ಸನತ್ಸುಜಾತನುಮುನಿಯು ತೃಣಬಿಂದು ಮಾರ್ಕಾಂಡೇಯ ರೋಮಶನುಘನ ವಾಮದೇವ ದತ್ತಾತ್ರೇಯ ವಡಬನುಚಿನುಮಯರಿವರು ಬ್ರಹ್ಮತಾನೆಂದು ಭಾವಿಪರು3 ನಿತ್ಯ ತಾವೆಂದು ಭಾವಿಸುವರು 4 ಭವ ಮೂಲ ಹರಿವುದುಬ್ರಹ್ಮ ಬೇರೆನಲು ಬಹುಜನ್ಮವೇ ಬಹುದುಬ್ರಹ್ಮತಾವೆಂದು ಭಾವಿಸಿ ನೀವು ನಿತ್ಯಬ್ರಹ್ಮ ಚಿದಾನಂದ ತಾವಾಗುವಿರಿ ಸತ್ಯ 5
--------------
ಚಿದಾನಂದ ಅವಧೂತರು
ಬ್ರಹ್ಮಣ್ಯ ತೀರ್ಥ ಗುರು ರಾಜಾ | ನಿನ್ನನಮ್ಮಿದೆನೊ ಭಾಸ್ಕರ ಸುತೇಜಾ | ಭಾವಿಬೊಮ್ಮ ಮತವರುಹಿ ಮಹೋಜಾ | ಸಲಹೊಪ್ರಮ್ಮೇಯಂಗಳ ನಿಧಿಯ ಸಹೋಜಾ ಪ ಓದ್ದಾಡುತಿಹೆನೊ ಈ ಭವದೀ | ಸುಖಗದ್ದುಗೆಯನೇರ್ವಂಥ ಹಾದೀ | ತೋರಿಉದ್ಧರಿಸೊ ಬಲು ಕೃಪಾಜಲಧೀ | ಗುರುವೆಶುದ್ಧ ಬುದ್ಧಿಯ ನೀಯೊ ಮುದದೀ 1 ಯಾತ್ರೆಗಳ ಮಾಡ್ದೆನೆಂಬ | ಬಿಂಕದ್ವಾರ್ತೆಯೊಂದಲ್ಲದಲೆ ಇಂಬ | ಕಾಣೆಕ್ಷೇತ್ರ ಮೂರ್ತಿಯ ಕಾಂಬನೆಂಬ | ಆಶೆಪೂರ್ತಿ ಮಾಡೆನ್ನ ಗುರು ಬಿಂಬ 2 ಧನವನಿತೆ ವಿಷಯದಲ್ಲೀ | ಬಹಳ ಮನ ಮಾಡಿ ನೊಂದೆನಲ್ಲೀ | ಹರಿಯಮನ ಮುಟ್ಟೊ ಭಜಿಸು ಎಂಬಲ್ಲೀ | ಇನ್ನುಘನ ಜ್ಞಾನ ಭಕುತಿ ಇಲ್ಲಲ್ಲೀ 3 ಜೀವಗೆಲ್ಲಿಯ ಸ್ವತಂತ್ರಾ | ಹರಿಗುರುತಾವಲ್ಲಿ ಮಾಡುತಿಹ ತಂತ್ರ | ದಿಟವಿದುಜೀವನೇ ಮಾಳ್ಪುನೆಂಬುದೆ ಕುತಂತ್ರ | ತಿಳಿಸೊಭಾವ ಜಾನಯ್ಯನ ಸ್ವತಂತ್ರ 4 ಸಾರ ವ್ರಾತ | ತಿಳಿಸೊಜ್ಞಾನ ನಿಧಿ ಪುರುಷೋತ್ಮ ತಂತ್ರ 5 ಕಾರಕ ಕ್ರಿಯ ದ್ರವ್ಯವೆನಿಪ | ಭ್ರಮವುಮೂರರಿಂದಲಿ ದೂರ ಮಾಳ್ಪ | ಮಾರ್ಗತೋರಿಸಲಹುವುದು ಯತಿ ಭೂಪ | ತವಪದವಾರಿ ಜತೆ ಈ ನೀಚ ಬೀಳ್ಪ 6 ತ್ರ್ಯಕ್ಷಾಂಶ ಭೂತರಾದ | ಸನ್ಯಾಸಿಅಕ್ಷೋಭ್ಯ ಕರಜರಾದ | ಅಜೇಯಇಕ್ಷುಚಾಪನ್ನ ಗೆಲಿದ | ಜಯಾರ್ಯಭಿಕ್ಷುವಿನ ಮಾರ್ಗರಾದ7 ಮೋದ | ಪಡೆವದಾಯ ತೋರಿದಿ ನಿರ್ವಿವಾದ | ಇನ್ನುಗಾಯನದಿ ಮಹಿಮೆ ಅಗಾಧ | ಪೇಳ್ವಆಯತವ ನೀಯೋ ಸುಭೋಧ 8 ಬೃಹತೀ ಸಹಸ್ರ ಮಂತ್ರ | ಜಪಿಪಮಹಯೋಗದಾತ ಮಹಾಂತ | ಬೇಡ್ವೆಬೃಹತಿನಾಮಕನು ಎಂಬಂಥ | ಹರಿಯಮಹ ಮಹಿಮೆ ಕಂಡು ಹಿಗ್ವಂಥ 9 ಸೃಷ್ಟ್ಯಾದಿ ಅಷ್ಟಕಗಳ | ಗೈವಕೃಷ್ಣನ್ನ ಮಹಿಮೆಗಳ | ಕೇಳಿಹೃಷ್ಟರಾಗುವ ಜನಗಳ | ಸಂಗಕೊಟ್ಟುದ್ಧರಿಸೊ ನಮ್ಮಗಳ 10 ಸದನ 11
--------------
ಗುರುಗೋವಿಂದವಿಠಲರು
ಬ್ರಹ್ಮದೇವರ ಸ್ತೋತ್ರ* ಮಟ್ಟತಾಳ ಕಂಬು ವಿಹಂಗ ಗಮನ ವಿಭುವೆನಂಬಿದವರ ಪೊರೆವ ವ್ಯಾಸವಿಠಲ ನೀ-ನೆಂಬುವರನ ನಂಬಿದ ನೀಚನ ಮರಿಯಾದಿರು 2 ತ್ರಿವಿಡಿತಾಳ ಜಿಹ್ವೆ ನುಡಿಯದುಸವಿಯದ ನಾನಾ ರಸವನುಂಡು ಬಹುಕಾಲಸವೆದು ಪೋದವು ನಟ್ಟ ಮನವು ಇನ್ನು ತಿರಗದುತವ ವಿಸ್ಮøತಿಯಲಿಂದ ಭೂ ವನದೊಳಿದ್ದ ಮಾ-ನವರ ಚರಿಯದಲಿ ಕೋಪವೆ ತಗ್ಗದುಎವೆ ಇಡುವಿನಿತು ಕಾಲವಾದರು ಪೂಜಾವಿವರದಲ್ಲಿಗೆ ಚಿತ್ತವು ನಿಲ್ಲದು ಭವವಿದೂರನೆ ಕೇಳುಕವಲ ಬುದ್ಧಿಯಲಿಂದ ನವನವ ರೂಪದ ಯುವತಿಯರನಿವಹದ ಅನುಭವ ದ್ವಿವಿಧವಿಂದಿಗೇ ಕಾ-ಯವ ನೋಡಲಿದ್ದಂತೆ ಇಲ್ಲದಂತೆಧ್ರುವದಲಿ ನುಡಿವೆ ಎನ್ನವಗುಣವಿನ್ನೊಂದುಭವಸಾಗರವ ದಾಟಿಸುವ ಜ್ಞಾನಿಗಳ ಪ್ರೀತಿಯನೆ ತ-ಗ್ಗುವಂತೆ ಚತುರ ತೋರುವೆಇವುಗಳಿಂದಾಗುವ ಜನನ ಬಾಧಿಯ ಬಲ್ಲೆಜೀವರಲ್ಲಿ ಹೀನ ಜನ್ಮವ ಬರುವದು ಬಲ್ಲೆಸ್ಥಾವಿರಾಯ ವ್ಯಾನಾದಿ ನೆಗುವವು ಪುಣ್ಯಾಖ್ಯಗಿರಿಗೆಪವಿಯಂಬದನುಗಾಲ ಪಠಿಸಬಲ್ಲೆಪವನನಂತರ್ಯಾಮಿ ಶ್ರೀವ್ಯಾಸವಿಠಲ ಇಂಥಅವಿವೇಕ ಮನುಜಂಗೆ ಆವಗತಿಯಾಗುವದೊ 3 ಅಟ್ಟತಾಳ ಅನ್ಯಾಯ ನಡತಿಗಳ ಚರಿಸುತಲಿಪ್ಪಮನುಜಾಧಮನಿಗೆ ಮಹಿಯೊಳಗೆ ವಿಪ್ರಜನ್ಮವ ನೀನಿತ್ತದಾವ ಬಗೆಯ ಕಾಣೆಇನ್ನೀಗ ಮಾಡುವ ಅನ್ಯಾಯ ನಡತಿಯುತಣ್ಣನ ಕಿಡಿಯಂತೆ ತತ್ಕಾಲಕಿಪ್ಪದುಘನ್ನ ಬವಣೆ ಮುಂದೆ ಅನುಭವವೇ ನಿಜಪನ್ನಗ ಶಯನ ಶ್ರೀ ವ್ಯಾಸವಿಠ್ಠಲ ಸುಪ್ರಸನ್ನ ವದನ ದೇವ ನಿನ್ನ ಪಾದವೆ ಗತಿ 4 ಆದಿತಾಳ ಪಾದ ಚೆನ್ನಾಗಿ ಪೊಂದಿಸಿನಿನ್ನವನಿವನೆಂದು ಮನುಜರಿಂದ ನುಡಿಸಿನಿನ್ನ ಕೀರ್ತನೆಯ ವದನದಿಂದ ಪೇಳಿಸಿಇನ್ನು ಈ ಬಗೆ ಮಾಳ್ಪರೆ ಘನ್ನದಯಾಂಬುಧೇಮನ್ನ ವಾಚ ಕಾಯದಿ ಅನ್ಯಾಯ ಪೆಚ್ಚಿಸದೆಎನ್ನ ಬೆಳವಿಗೆಯಂತೆ ಬೆಳಸದಂತೆ ಮಾಡಿದೆಮನ್ನಣಿಸುವ ಜನರಿಂದ ಮಾಂದ್ಯವ ಮಾಡಿಸಿದೆಸನ್ಯಾಯವಲ್ಲ ಧೊರಿಯೆ ನಿನ್ನ ಚಿತ್ತವೊ ಸ್ವಾಮಿಸನ್ಮುನಿಗಣ ಪ್ರೀಯ ವ್ಯಾಸವಿಠ್ಠಲರೇಯಾನಿನ್ನವರವನೊ ನಿನ್ನ ಸರಿ ಬಂದ ಬಗೆ ಮಾಡೊ 5 ಜತೆ ವೇಣುಗೋಪಾಲ ದಾಸರ ಮನ ಮಂದಿರಾ |ಪ್ರಾಣ ನಿನ್ನದೊ ವ್ಯಾಸವಿಠ್ಠಲ ಗೋಪಾಲಕೃಷ್ಣ ||
--------------
ವ್ಯಾಸವಿಠ್ಠಲರು
ಬ್ರಹ್ಮಾಸ್ತ್ರ ಬ್ರಹ್ಮಾಸ್ತ್ರ ಎಂಬ ಮಾತೆಂತೆನೆಬದಲಿಲ್ಲದಿರುವುದೇ ಬ್ರಹ್ಮಾಸ್ತ್ರಬ್ರಹ್ಮಾಸ್ತ್ರಕೆ ಬ್ರಹ್ಮಾಸ್ತ್ರವೇಯಲ್ಲದೆಬ್ರಹ್ಮಾಸ್ತ್ರವೇ ಬ್ರಹ್ಮಾಸ್ತ್ರವು ಬ್ರಹ್ಮಾಸ್ತ್ರ ಪ ಪಾಶುಪತಾಸ್ತ್ರ ನಾರಾಯಣಾಸ್ತ್ರವನೆಲ್ಲಪೂರ್ಣಾಹುತಿಯ ಕೊಂಬುದೇ ಬ್ರಹ್ಮಾಸ್ತ್ರವಾಸವಾದಿತ್ಯ ಆಗ್ನೇಯಾಸ್ತ್ರವನೆಲ್ಲಬೆದರದೇ ನುಂಗುವುದೆ ಬ್ರಹ್ಮಾಸ್ತ್ರ1 ಜಿಹ್ವೆ ಹಿಡಿದತುರೀಯ ದೇವತೆಬ್ರಹ್ಮಾಸ್ತ್ರವೇ ಅಸ್ತ್ರವು ಬ್ರಹ್ಮಾಸ್ತ್ರ 2 ಬ್ರಹ್ಮ ತುರೀಯಾತೀತ ಬ್ರಹ್ಮಾಸ್ತ್ರನಿರ್ಗುಣ ಬ್ರಹ್ಮಾಸ್ತ್ರವೆ ಸ್ವರಾಟ್ ಬ್ರಹ್ಮಾಸ್ತ್ರಬ್ರಹ್ಮ ಚಿದಾನಂದ ಬ್ರಹ್ಮಾಸ್ತ್ರವೆನಿಸಿತುಬ್ರಹ್ಮಾಸ್ತ್ರವೇ ಬಗಳ ಬ್ರಹ್ಮಾಸ್ತ್ರ 3
--------------
ಚಿದಾನಂದ ಅವಧೂತರು
ಭಕುತರ ಸಂರಕ್ಷಣಾ ನಾರಾಯಣ ಪ ಖಗಪನ ಸ್ಕಂದರೋಹ ಅಘದೂರ ಅಭಯಹಸ್ತ ಸ್ವಗತಭೇದಶೂನ್ಯ ಸರ್ವಾವಸ್ಥೆಯೊಳೆನ್ನ ವಿಗತಕ್ಲೇಶನ ಮಾಡಿ ಸತತಕಾಪಾಡಲಿ ನಿಗಮವಿನುತ ಜಗದಾದಿ ವಂದ್ಯನೆ ದೇವಾ 1 ವರುಣಪಾಶಗಳಿಂ ಜಲಚರಜಂತುಗಳಿಂ ಮತ್ಸ್ಯ ಮೂರುತಿ ತಾ ರಕ್ಷಕನಾಗಿರಲಿ ಧಾರುಣಿ ನೆಲದೊಳು ಶ್ರೀ ವಾಮನ ಕಾಯಲಿ ಸರ್ವಾಕಾಶದೊಳು ತ್ರಿವಿಕ್ರಮ ಕಾಯಲಿ2 ದುರ್ಗರಣಾಗ್ರವನ ಅರಿವರ್ಗಗಳಲಿ ನರಹರಿದೇವ ಸಂರಕ್ಷಕನಾಗಿರಲಿ ಮಾರ್ಗಗಳಲ್ಲಿ ಹಿರಣ್ಯಾಕ್ಷ ವೈರಿಯು ಕಾಯಲಿ ದುರ್ಗಮಶೈಲದೊಳು ಶ್ರೀ ಭಾರ್ಗವ ರಕ್ಷಿಸಲಿ 3 ದಾಶರಥಿ ಪ್ರವಾಸದಲಿ ನಿತ್ಯ ದೇಶಾಂತರಗಳಲ್ಲಿದ್ದರು ಕಾಯಲಿ ಈಶ ಶ್ರೀಮನ್ನಾರಾಯಣ ಎನ್ನ ಕ್ರೂರ ಕರ್ಮಗಳಿಂದ ರಕ್ಷಿಸಲನುದಿನ ನರಾವತಾರ ಎನ್ನ ಗರುವಿನಿಂ ರಕ್ಷಿಸಲಿ 4 ವಿರೋಧಿವರ್ಗದಿ ದತ್ತಾತ್ರೇಯ ಕಾಯಲಿ ಸರ್ವಕರ್ಮಬಂಧಜ್ಞಾನದಿಂದ ಕಪಿಲಾ ಮೂರುತಿ ರಕ್ಷಿಸಲಿ ಅನುದಿನದಲಿ ಎನ್ನ ಸನತ್ಕೂ- ಮಾರನು ಎನ್ನ ಕಾಯಲಿ ಕಾಮದಲ್ಲಿ 5 ದಾನವ ಮಧುಕೈಟಭ ಹರೆ ಹಯವದನ ಘನ್ನಪರಾಧದಿ ರಕ್ಷಕನಾಗಿರಲಿ ಮನ್ನಿಸಿ ದೇವತೆಗಳು ಸಾಧನವೀಯಲಿ ಸನ್ನುತಾಂಗ ಧನ್ವಂತ್ರಿಮೂರುತಿ ಹರಿ ಎನ್ನ ರಕ್ಷಕನಾಗಿರಲಿ ರುಜೆಯೊಳು6 ಜ್ಞಾನರೂಪಿ ವೃಷಭ ಸೀತಾತಪದಿಂದ ಎ- ನ್ನನುದಿನ ಈ ದ್ವಂದ್ವÀದಿ ಕಾಯಲಿ ಯಜ್ಞಮೂರುತಿ ಲೋಕಾಪವಾದದಿ ಕಾಯಲಿ ಸುಜ್ಞಬಲರಾಮನು ದುರ್ಜನರ ಭಯದಿಂ ಅನುದಿನ ರಕ್ಷಿಸಲಿ 7 ಘನ್ನಮಹಿಮ ಶೇಷ ಸರ್ಪಬಾಧೆಗಳಿಂದ ಜ್ಞಾನದಾತೃ ಹರಿಸೇವೆಗೆ ಬರುತಿಹ ನಾನಾ ವಿಘ್ನಗಳಿಂದ ರಕ್ಷಿಸುತಿರಲಿ ಘನ್ನ ಮ- ಹಾ ನರಕ ಬಾಧೆಯಿಂ ತಪ್ಪಿಸಲಿ ಕೂರ್ಮಮೂರುತಿ ಕಾಪಾಡಲಿ ನಿತ್ಯದಿ 8 ವೇದವ್ಯಾಸನು ಶುಧ್ಧಜ್ಞಾನವನೀಯಲಿ ಬುದ್ಧಿಮೋಹದಿಂದ ಬುದ್ಧನುದ್ಧÀ್ದರಿಸಲಿ ಹೃದಯದ ಕಲಿಭಾಧೆ ಕಲ್ಕಿ ತಾ ಹರಿಸಲಿ 9 ಉದಯಕಾಲದಿ ಶ್ರೀ ಕೇಶವ ರಕ್ಷಿಸಲಿ ವೇಣು ಹಸ್ತ ಗೋವಿಂದ ಸಂಗಮದಲ್ಲಿ ಪೂರ್ಣಕರುಣೆ ಯಿಂದ ಎನ್ನ ಕಾಪಾಡಲಿ ಪೂರ್ವಾಹ್ನದಲಿ ನಾರಾಯಣ ರಕ್ಷಿಸಲಿ10 ಮಾಧವ ಅಪ ರಾಹ್ನದಲೆನ್ನ ರಕ್ಷಿಸಲಿ ಬಾಧೆಯಿಂ ಸಾಯಂಕಾಲದಿ ರಕ್ಷಿಸಲಿ 11 ಪ್ರದೋಷದಲಿ ಹೃಷೀಕೇಶ ರಕ್ಷಿಸಲೆನ್ನ ಪದುಮನಾಭ ಅರ್ಧರಾತ್ರಿಯಲಿ ಸಲಹಲಿ ಶ್ರೀಧರನೆನ್ನಪರಾತ್ರಿಯಲಿ ಸಲಹಲಿ12 ಜನಾದರ್Àನನು ಎನ್ನನು ಉಷಃಕಾಲದಲಿ ಸಂಧ್ಯಾಕಾಲದಿ ದಾಮೋದರ ರಕ್ಷಿಸಲಿ ಕಾಲನಾಮಕ ಬೆಳಗಿನಝಾವದಿ ಕಾಯಲಿ 13 ನಕ್ರನ ಹರಿಸಿದ ಚಕ್ರಾಯುಧವು ಎನ್ನ ಶತ್ರುಬಾಧೆಗಳಿಂದ ರಕ್ಷಿಸುತಿರಲಿ ವಿಕ್ರಮಗದೆಯು ಆಶ್ರಿತರುಪದ್ರದು- ಅನುದಿನ 14 ಪ್ರಮಥ ಭೂತ ಪಿಶಾಚ ಪ್ರೇತ ಭಯದಿ ಪಾಂಚಜನ್ಯ ಶಂಖರಾಜ ರಕ್ಷಿಸಲಿ ದುಮ್ಮನ ಶತ್ರು ಬಾಧೆಗಳಿಂದ ಖಡ್ಗವು ಖೇಟವು ಸರ್ವ ಅನಿಷ್ಟದಿಂ ರಕ್ಷಿಸಲಿ 15 ಅವನ ನಾಮರೂಪ ದಿವ್ಯಾಯುಧದ ಸ್ಮರಣೆ ಸರ್ವ ಬಂಧಗಳೆಲ್ಲ ತಕ್ಷಣದಲ್ಲಿ ನಿವಾರಣೆಯಾಗಿ ನಿವೃತ್ತಿಮಾರ್ಗಕ್ಕೆ ಶುಧ್ಧಭಾವ ಭಕುತಿಗೆ ಕಾರಣವು ಸತ್ಯ ಗರುಡ ವಿಷ್ಟಕ್ಸೇನ ಕಷ್ಟದಿಂದ ರಕ್ಷಿಸಲಿ 16 ಹರಿಯ ವಾಹನಾದಿಗಳು ವಿಪತ್ತುಗಳ ಹರಿಸಲಿ ಸರ್ವರಂತರ್ಯಾಮಿ ನಿನ್ನ ನಂಬಿರಲು ಸರ್ವಭಾಧೆಗಳಲ್ಲ ಪರಿಹಾರವಾಗಲಿ 17 ಕಾಲ ಸರ್ವಾವಸ್ಥೆಯೊಳೆನ್ನ ಸರ್ವೋತ್ತಮ ದೇವ ಸರ್ವದಾ ರಕ್ಷಿಸಲಿ ಸರ್ವರೊಡೆಯ ಶ್ರೀಮನ್ನಾರಾಯಣ ನಿನ್ನ ಕರುಣ ಕವಚವು ಎನಗಿರಲನುದಿನ 18 ಬಹಿರಾಂತರದಿ ಮೇಲ್ ಕೆಳಗು ಮಧ್ಯದಲ್ಲಿ ದಿಕ್ಕುವಿದಿಕ್ಕಿನೊಳು ಉರಗಾದ್ರಿವಾಸವಿಠಲ ಸ್ವಾಮಿ 19
--------------
ಉರಗಾದ್ರಿವಾಸವಿಠಲದಾಸರು
ಭಕುತಿ ಸುಲಭವಲ್ಲ ಶ್ರೀ ಹರಿ ಭಕುತಿ ಸುಲಭವಲ್ಲ ಪ ಮುಕುತಿಗೆ ಯುಕುತಿ ಬೇರೆಯಿಲ್ಲ ಶ್ರೀ ಹರಿ ಅ.ಪ ಉರುತರ ಕ್ಲೇಶಕೆ ಗುರಿಯಾಗುತಿರಲು ಹರಿ ಹರಿಯೆನ್ನುತ ಕಿರುಚುತ ಸತತವು ಕ್ಲೇಶ ಹರಿಯನು ಸುಲಭದಿ ಮರೆವುದು ಭಕುತಿಯ ತರವಾಗುವುದೇ 1 ಭುವಿಯಲಿ ಬಹು ವಿಧ ಸುವಿನೋದಗಳ ಸವಿಯನು ಪೊಂದಲು ವಿವಿಧ ಭಾಗ್ಯಗಳ ಸುವಿನಯದಲಿ ಮಾಧವನನು ಬೇಡಲು ಹವನ ಹೋಮಗಳು ಭಕುತಿಯಾಗುವುದೇ 2 ಶ್ರವಣ ಮನನ ವಿಧಿಧ್ಯಾಸಗಳಿಂ ಸಿರಿಪತಿ ಗುಣಗಣದಲಿ ದೃಢಮತಿಯನು ಮಾಡುತ ತನುಮನಗಳನÀರ್ಪಣೆಯನು ಮಾಡುತ ಮನಸಿಜ ಜನಕ ಪ್ರಸನ್ನನಾಗುವಂಥ 3
--------------
ವಿದ್ಯಾಪ್ರಸನ್ನತೀರ್ಥರು
ಭಕ್ತಿಯಿಂದ ಭಜಿಸೋಣಧ್ವರಿಯನಮ್ಮ ಮುಕ್ತಿಪಥವ ನೀಡುವ ಕೃಷ್ಣವರ್ಯ ಪ ಭಕ್ತಿ ಮುಕ್ತಿ ಸಹ ಯೋಜಿಸಿ ಅಶಕ್ತವ ಕಳೆದುಸಶಕ್ತರ ಮಾಡುವ ಶಕ್ತಿವಂತನವ ಅ.ಪ. ಮೂರ್ತಿ ಮೂರು ಸ್ಥಾನದಿ ಮೂರೂ ಕಾಲದಿ ಮೂರು ಜನರು ಸೇರಿ 1 ಮಧ್ವಶಾಸ್ತ್ರದೊಳಗೆ ಮುಳುಗಿ ಮತ್ತೆ ಶ್ರೀ ಮಧ್ವಪುರಕೆ ಪೋಗಿ ಮದ್ ಹೃದ್ವನಜದೊಳಗೆ ಯೋಗೀ ಮಧ್ವ ಮುನೀಶರಪಾದಕೆ ಬಾಗಿ 2 ಯೋಗಿ ವ್ಯಾಸದಾಸನೆಂದೆನಿಪ ವೇದವ್ಯಾಸಮಧ್ವ ಭೀಮಪನ ಗಿರೀಶಾ ತಂದೆವರದಗೋಪಾಲವಿಠಲೇಶಾ 3
--------------
ತಂದೆವರದಗೋಪಾಲವಿಠಲರು
ಭಜಿಪ ಭಕ್ತರ ಭಾವ ಪರಿಪೂರ್ಣ ಬಾಗಿ ಭಜಿಸುವೆ ಬಾರೊ ದಯಾಸದನ ಪ ಪಾದಸೇವೆಯ ಕರುಣಿಸಿ ಪರ ಸಾಧನದ ಮಹದ್ಹಾದಿ ತೋರಿಸಿ ಬಾಧಿಸುವ ಭವಬಾಧೆ ತೊಲಗಿಸಿ ವೇದವಿದ್ಯವ ಬೋಧಿಸಭವ 1 ನಿತ್ಯ ನಿಮ್ಮ ಗುರ್ತುತೋರಿಪ ತತ್ವದರ್ಥವ ತುರ್ತುಪಾಲಿಸು ಕರ್ತುವೇದ 2 ಭಕ್ತವತ್ಸಲನೆಂಬ ಬಿರುದು ಸತ್ಯವಾಗಿ ಹೊತ್ತುಕೊಂಡಿಹಿ ಭಕ್ತನಿಷ್ಟವ ಚಿತ್ತೈಸೊಡನೆ ಮುಕ್ತಿಪದ ನೀಡಾತ್ಮರಾಮ 3
--------------
ರಾಮದಾಸರು
ಭಜಿಸಿ ಬದುಕಿರೋ _ ಭರದಿ ಸುಜನ ರೆನಿಸಿರೋ ಪ ಸುಜನ ರಾಜ ರಾಘವೇಂದ್ರರಾ ಅ.ಪ ಸುಜನ ಮಲಿನ ಕಳಿಯಲು ಒಲಿದು ಭವಿಯೊಳು _ ಬಂದ ಅಲವ ಮಹಿಮರ 1 ವೇಧ ದೂತರ _ ಪ್ರಹ್ಲಾದರೆಂಬರ ಸಾಧು ಸೇವ್ಯರ _ ದುರ್ಬೋಧೆ ಕಳಿವರ 2 ನಾರಸಿಂಹನ ಕರುಣ ಸೂರೆ ಪಡದಿಹ ಭಾರಿ ಭಕ್ತರ ದೇವರ್ಷಿ ಛಾತ್ರರ 3 ವ್ಯಾಸರಾಯರ _ ಶ್ರೀನಿವಾಸ ಯಜಕರ ಶೇಷದೇವರ ಆವೇಶ ಯುಕ್ತರ 4 ರಾಜ ಗುರುಗಳು ಕವಿರಾಜ ಮಾನ್ಯರು ನೈಜ ತೇಜರು ನಿವ್ರ್ಯಾಜ ಪ್ರೇಮರು 5 ಹರಿಯ ತರಿಸಿದಾ ಮುರಹರನ ಕುಣಿಸಿ ದಾ ಮುರವ ಹರಿಸಿದಾ ಧೊರೆಗೆ ಹರುಷ ಸುರಿಸಿದಾ 6 ಮಾನವಂತರಾ ಬಹುಜ್ಞಾನವಂತರಾ ದಾನ ಶೀಲರಾ ಅನುಮಾನ ರಹಿತರ 7 ಭ್ರಾಂತಿ ವಾದವ ವಿಶ್ರಾಂತಿ ಗೊಳಿಸಿದ ಶಾಂತಿ ಸಾಗರ ವೇದಾಂತ ಭಾಸ್ಕರ 8 ಶ್ರೀ ಸುಧೀಂದ್ರರ ವಿಶ್ವಾಸ ಪುತ್ರರ ದೋಷದೂರರ _ ಗುರು ದೋಷ ಕಳಿವರ 9 ಮಂತ್ರ ಸಿದ್ಧರು ಬಹು ಗ್ರಂಥ ಕರ್ತರು ತಂತ್ರ ಮಲ್ಲರು ಹರಿ ಮಂತ್ರಿ ಸಚಿವರು 10 ಭವ ರೋಗ ವೈದ್ಯರ ರಾಗ ರಹಿತರ ವೈರಾಗ್ಯ ಭಾಗ್ಯರ 11 ವಾದಿ ಭೀಕರ ಶ್ರೀವಿಜೀಂದ್ರ ಪೌತ್ರರ ನಿತ್ಯ ಮಿಂದು ಮೀಯ್ವರ 12 ತರ್ಕದಿಂದಲು ಹರಿಯು ಶಕ್ತಿಯಿಂದಲು ಯುಕ್ತಿಯಿಂದಲು ಒಲಿಯ ಭಕ್ತಿ ಇಲ್ಲದೆ 13 ಶ್ರೀಶ ದಾಸರ ಪದ ಪಾಂಶು ಧರಿಸದೆ ದೇಶ ತಿರುಗಲು ಬರಿಘಾಸಿ ಸಿದ್ಧವು 14 ಭಕ್ತರೊಲಿಯದೆ ನಿಜ ಭಕ್ತಿ ಸಿಕ್ಕದು ಪಕ್ವವಾಗದೆ ಭಕ್ತಿ ದಕ್ಕ ಶ್ರೀ ಹರಿ 15 ಇವರ ಮಂತ್ರವ ಭಕ್ತ ಜವದಿ ಜಪಿಸಲು ಅವಗೆ ಕರಗತ ಸಿದ್ಧ ಭವದಿ ವಾಂಛಿತ 16 ಶ್ರೀನಿವಾಸನ ಭಕ್ತ ಶ್ರೇಣಿ ಸೇರುವ 17 ಅಲ್ಪ ಸೇವೆಯೆ ಮೇರು ಕಲ್ಪ ವಾಹುದೊ ಕಾಕು ಸ್ವಲ್ಪ ತಟ್ಟದೊ 18 ನಿಖಿಳ ಯಾತ್ರೆಯಾ ಫಲ ಭಕ್ತ ಪಡೆಯುವ ಸಂದೇಹ ಸಲ್ಲದೊ 19 ಪುತ್ರ ನೀಡುವ ಸಂಪತ್ತು ದೊರಕಿಪ ವೃತ್ತಿ ಕಲ್ಪಿಪ ಆಪತ್ತು ಕಳಿಯುವ 20 ರಾಮ ನರಹರಿ ಕೃಷ್ಣ ಬಾದರಾಯಣ ದಿವಿಜ ಸ್ತೋಮ ವೆಲ್ಲವು 21 ಸೇರಿ ಇವರಿಗೆ ಕೀರ್ತಿ ಸೂರೆ ಕೊಡುತಿರೆ ಪಾರವಿಲ್ಲವು ಸತ್ಯ ಮಹಿಮೆ ಗೆಂಬುವೆ 22 ಕರ್ಣ ವಿದಿತರು ವಿಘ್ನ ಕಳಿವರು ಶ್ರೀ ಸತ್ಯ ಸಂಧರು 23 ಗುರುವು ಒಲಿದರೆ ತಾ ಹರಿಯು ಒಲಿಯುವ ಗುರುವು ಮುನಿದರೆ ಯಾರು ಪೊರೆವರಿಲ್ಲವೊ 24 ಶುದ್ಧ ಭಕ್ತಿಲಿ ಈ ಪದವ ಪಠಿಸಲು ಸಿಧ್ಧಿ ಸತ್ಯವು ಸರ್ವತ್ರ ವಿಜಯವು25 ಸಾರಿ ಸಾರುವೆ ಕೇಳಿ ಕ್ರೂರ ಕಲಿಯಲಿ ದೂರ ಸಾಧನೆ ಇವರ ಸೇರ ದಿರ್ಪಗೆ26 ಜಿಷ್ಣು ಸೂತ ಶ್ರೀ ಕೃಷ್ಣ ವಿಠಲನ ಶ್ರೇಷ್ಟ ಭಕ್ತರ ಶ್ರೀ ರಾಘವೇಂದ್ರರ27
--------------
ಕೃಷ್ಣವಿಠಲದಾಸರು
ಭದ್ರಾಮೂರುತಿ ನಿರ್ವಾತಾಂಹ್ವ ಪ ಹೃದ್ರೋಗ ಕಳೆದು ಜ್ಞಾನಾದ್ರ್ರ ಸ್ವಾಂತನ ಮಾಡು ಪದ್ರಾ ಸಾಮಗಾಘ ಸಮುದ್ರ ದಾಟಿಸಿ ಬೇಗ ಅ ಏಸೇಸು ಕಲ್ಪಗಳಲ್ಲಿ ನಿನ್ನಾ ದಾಸನೆಂದು ಎನ್ನ ಬಲ್ಲೀ ಈಶ ನೀನೆಂಬುದು ಲೇಶವರಿಯೆ ಕ್ಲೇಶನಾಶನ ಪ್ರಭುವೆ ವಾರಾಶಿಜೆ ವಲ್ಲಭ ವಾಸವಾನುಜ ವನಧಿಶಯನ ಮ ಹೇಶವಂದಿತ ವರದ ಹೇ ಕರು ಣಾ ಸಮುದ್ರ ಕರಾಳವದನನೆ ನೀ ಸಲಹದಿರೆ ಕಾಣೆ ಕಾಯ್ವರ 1 ಹೇಮ ಕಶ್ಯಪು ತನ್ನ ಸುತನಾ ನೋಯಿಸೆ ಶ್ರೀ ಮನೋಹರನೇ ಆನತನಾ ವ್ಯೋಮ ಪರ್ವತಾಂಬುಧಿ ಧಾಮದೊಳುಳುಹಿದ ಭೂಮ ಸನ್ಮುನಿ ಗಣಸ್ತೋಮ ವಂದಿತ ಪಾದ ಸಾಮಜೇಂದ್ರನನರಸಿಯೊಳು ಸು ತ್ರಾಮನಂದನನಾ ರಣದಿ ಕುರು ಭೂಮಿಪತಿ ಸಭೆಯೊಳಗೆ ದ್ರೌಪದಿ ಯಾ ಮಹಾತ್ಮರ ಕಾಯ್ದ ಕರುಣಿ 2 ವೇದಗಮ್ಯನೆ ವೇದ ವ್ಯಾಸ ಕಪಿಲ ಯಾದವೇಶ ಮಹಿದಾಸ ಶ್ರೀದ ಶ್ರೀಶ ಅ ನ್ನಾದಾ ಕಲ್ಕಿ ಧನ್ವಂತ್ರಿ ಮೇಧಾವಿ ಪತಿಯ ಏವ ಷಾದರೋಗಂಗಳನಳಿದು ಮಹ ದಾದಿದೇವ ಜಗನ್ನಾಥ ವಿಠ್ಠಲ ಆದರದಿ ಪ್ರಹ್ಲಾದವರ 3
--------------
ಜಗನ್ನಾಥದಾಸರು
ಭಯವಿಲ್ಲೋ ಭಯವಿಲ್ಲೋ ಭಯಹರ ನರಸಿಂಗನಡಿಯ ದಾಸರಿಗೆ ಪ ವೃಶ್ಚಿಕ ಮುಟ್ಟಲು ಬಾಧೆಯೆ ಇಲ್ಲ ತಕ್ಷ ಕಚ್ಚಲು ವಿಷವಂಟೋಣಿಲ್ಲ ಅಚ್ಯುತಾನಂತನ ಹೆಚ್ಚಿನಡಿದಾವರೆ ಮುಚ್ಚಿಭಜಿಪ ಮಹ ನಿಶ್ಚಲಚಿತ್ತರಿಗೆ 1 ಕಳ್ಳರು ಮುತ್ತಲು ಸುಲಕೊಂಬೋಣಿಲ್ಲ ದಳ್ಳುರಿ ಹತ್ತಲು ಸುಡುವ ಶಕ್ತಿಲ್ಲ ಪಾದ ಉಲ್ಲಾಸ ಮನದಿಂದ ನಿಲ್ಲದೆ ಭಜಿಪರ್ಗೆ ಎಳ್ಳಷ್ಟಾದರು 2 ಹುಲಿ ಕರಡಿ ಬದು ನುಂಗುವ ತ್ರಾಣಿಲ್ಲ ಬಲು ಭೂತ ಬೇತಾಳ ಎದುರೆ ಇಲ್ಲ ಮಲಿನಹರಣ ಕೃಪಾನಿಲಯ ಭಕ್ತಜನ ಸುಲಭನೆಂದೊದರುತ ನಲಿವ ನಿರ್ಮಲರಿಗೆ 3 ಭೂಪತಿಗಳ ಭಯ ರೋಮಕೆ ಇಲ್ಲ ಪಾಪತಾಪಗಳ ಲೇಪವೆ ಇಲ್ಲ ಆ ಪರಬ್ರಹ್ಮ ಜಗದ್ವ್ಯಾಪಕನನುದಿನ ಗೌಪ್ಯದಾರಾಧಿಸುವ ಪಾಪಲೋಪರಿಗೆ 4 ಏಸು ಕಷ್ಟಬಂದರಾಯಾಸವಿಲ್ಲ ನಾಶ ಮೃತ್ಯು ಗಾಳಿಸೊಂಕೋಣಿಲ್ಲ ಹೇಸಿ ದುರ್ಭವದ ವಾಸನಳಿದ ಮಹ ಶ್ರೀಶ ಶ್ರೀರಾಮನ ದಾಸದಾಸರಿಗೆ 5
--------------
ರಾಮದಾಸರು