ಬಂದಾ ಸುಂದರವದನ ಮಂದಹಾಸದಿ ರಘು
ನಂದನ ಧನು ಬಳಿಗೆ ಪ
ವಂದಿಸಿ ಕೌಶಿಕಗೆ ತಂದೆಯ ನೆನೆದು ಆ
ನಂದ ಮನದಲಿ ಮುಂದೆ ಮುಂದಕೆ ನಡೆದು
ಚಂದದಿ ಬರುತಿಹ ಅಂದನೋಡಿ ಮುನಿ
ವೃಂದ ಮನದೊಳಾನಂದವ ಪೊಂದುತ
ಇಂದಿರೇಶನಿವನೆಂದು ತಿಳಿದು ಭೂ
ನಂದನೆ ಇವನವಳೆವಂದು ಪೇಳುತಿರೆ ಅ.ಪ.
ಸಿಂಧುಶಯನ ಭಜಕ ಮಂದಾರ ಮುನಿಜನ
ವೃಂದ ಕುಮುದ ಚಂದ್ರ ಮಂದಜಾಸನ ವಂದ್ಯ
ಸಿಂಧುಸುತಾಲೋಲ ಸಿಂಧೂರ ಪರಿಪಾಲ
ಸಿಂಧೂರ ಗಮನದಿ ಸಿಂಧೂ ಗಂಭೀರ ಬರೆ
ಇಂದುವದನೆಯರು ಚಂದವ ನೋಡುತ
ಇಂದೀವಗೇ ಜಯವೆಂದು ನುಡಿಯುತಿರೆ
ಇಂದುಧರನ ಧನು ಬಂಧನ ಮಾಡಲು
ಇಂದಿರೇಶ ಶ್ರೀ ಕರಿಗಿರಿ ಮಂದಿರ 1